ಆಗ್ರಾ (ಉ. ಪ್ರದೇಶ): ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರುವವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಅವರ ಪುತ್ರಿ ಕೂಡತಂದೆಯಂತೆ ಭವಿಷ್ಯದಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಆಗುವ ಕನಸು ಹೊಂದಿದ್ದಾರೆ.
ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟವರಲ್ಲಿ ಪೃಥ್ವಿ ಸಿಂಗ್ ಚೌಹಾಣ್ ಒಬ್ಬರು. ಅವರ ಅಂತ್ಯಕ್ರಿಯೆಯನ್ನು ಇಲ್ಲಿನ ತಾಜ್ಗಂಜ್ ಚಿತಾಗಾರದಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಶನಿವಾರ ನೆರವೇರಿತು.
ಚೌಹಾಣ್ ಪುತ್ರಿ ಆರಾಧ್ಯ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 'ನನ್ನ ತಂದೆ ಅಧ್ಯಯನದತ್ತ ಗಮನ ಹರಿಸುವಂತೆ ಸಲಹೆ ನೀಡುತ್ತಿದ್ದರು. ನಾನು ಅಧ್ಯಯನದತ್ತ ಗಮನ ಹರಿಸಿದರೆ ಉತ್ತಮ ಅಂಕಗಳು ಲಭಿಸಲಿದೆ ಎಂದು ನಂಬಿದ್ದರು. ಭವಿಷ್ಯದಲ್ಲಿ ನಾನು ಕೂಡಾ ಪೈಲಟ್ ಆಗುವ ಕನಸು ಹೊಂದಿದ್ದೇನೆ' ಎಂದು ತಿಳಿಸಿದ್ದಾರೆ.
ವಿಂಗ್ ಕಮಾಂಡರ್ ಪೃಥ್ವಿ ಅವರ ಕುಟುಂಬವು 2006ರಲ್ಲಿ ಗ್ವಾಲಿಯರ್ನಿಂದ ಮಧ್ಯಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರು. 2000ನೇ ಇಸವಿಯಲ್ಲಿ ಭಾರತೀಯ ವಾಯುಪಡೆಗೆ ಭರ್ತಿ ಹೊಂದಿದ್ದರು.
ತಮಿಳುನಾಡಿನ ಕೂನೂರು ಸಮೀಪ ಡಿಸೆಂಬರ್ 8ರಂದು ಸೇನಾ ಹೆಲಿಕಾಪ್ಟರ್ ಪತನಗೊಂಡಿತು. ಈ ದುರಂತದಲ್ಲಿ ಸೇನಾ ಪಡೆಗಳ ಮೊದಲ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಮತ್ತು ಇತರ 12 ಮಂದಿ ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಸ್ಥಿತಿ ಗಂಭೀರವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.