ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿಯನ್ನು ಅಪಹರಿಸುವುದಾಗಿ ಅಪರಿಚಿತರು ಮುಖ್ಯಮಂತ್ರಿ ಕಚೇರಿಗೆ ಇ–ಮೇಲ್ ಮಾಡಿದ್ದು ದೆಹಲಿ ಪೊಲೀಸರು ಕೇಜ್ರಿವಾಲ್ ಪುತ್ರಿಗೆ ಭದ್ರತೆ ಒದಗಿಸಿದ್ದಾರೆ.
ಬೆದರಿಕೆ ಇ–ಮೇಲ್ ಬಂದಿರುವುದನ್ನು ಖಚಿತಪಡಿಸಿದ್ದು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ಕೇಜ್ರಿವಾಲ್ ಪುತ್ರಿ ಗುರುಗ್ರಾಮದಲ್ಲಿನಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸೂಕ್ತ ಭದ್ರತೆ ಕಲ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಹರಣದ ಬಗ್ಗೆ ಮುಖ್ಯಂತ್ರಿ ಕಚೇರಿಗೆ ಮೂರು ಇ–ಮೇಲ್ಗಳು ಬಂದಿವೆ. ಕೇಜ್ರಿವಾಲ್ ಪುತ್ರಿಯನ್ನು ಅಪಹರಣ ಮಾಡಲಾಗುತ್ತದೆ, ನಿಮಗೆ ಶಕ್ತಿ ಇದ್ದರೆ ಕಾಪಾಡಿಕೊಳ್ಳಿ ಎಂದು ಇ–ಮೇಲ್ನಲ್ಲಿ ಬರೆಯಲಾಗಿದೆ. ಈ ಮೂರು ಇಮೇಲ್ಗಳು ಜನವರಿ 9ರಂದು ಬಂದಿದ್ದು ಅವುಗಳನ್ನು ದೆಹಲಿ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಬೆದರಿಕೆ ಇ–ಮೇಲ್ ಕುರಿತಂತೆ ಇಲ್ಲಿಯ ತನಕ ಯಾವುದೇ ಪ್ರಕರಣವನ್ನು ದಾಖಲು ಮಾಡಿಲ್ಲ, ಸೈಬರ್ ಕ್ರೈಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆಎಂದುಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.