
ನವದೆಹಲಿ: ‘ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪೂರ್ಣಗೊಳಿಸಲು ಯಾರಿಗೂ ಅಡ್ಡಿಪಡಿಸಲು ಅವಕಾಶ ನೀಡುವುದಿಲ್ಲ’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಮತದಾರರಿಗೆ ನೀಡಿದ್ದ ನೋಟಿಸ್ ಹರಿದುಹಾಕಿದ ಪ್ರಕರಣದ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಡಿಜಿಪಿಗೂ ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದೆ.
ಮತದಾರರನ್ನು ಸಾಮೂಹಿಕವಾಗಿ ಹೊರಗಿಡುತ್ತಿರುವ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಳವಳದ ನಡುವೆಯೇ, ಸುಪ್ರೀಂಕೋರ್ಟ್ ಈ ಎಚ್ಚರಿಕೆ ನೀಡಿದೆ.
‘ಈ ವಿಷಯದಲ್ಲಿ ಯಾವುದೇ ಸ್ಪಷ್ಟನೆ ಅಗತ್ಯವಿದ್ದರೆ, ಈ ಕುರಿತು ಆದೇಶವನ್ನು ಹೊರಡಿಸಲಾಗುತ್ತದೆ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ.ಜಾಯ್ಮಾಲ್ಯ ಬಾಗ್ಚಿ, ನ್ಯಾ.ಅಂಜಾರಿಯಾ ಅವರನ್ನೊಳಗೊಂಡ ಪೀಠವು ಸೋಮವಾರ ತಿಳಿಸಿದೆ.
ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಪೀಠವು, ‘ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾರಿಗೂ ಅಡಚಣೆ ಉಂಟು ಮಾಡಲು ನಾವು ಅವಕಾಶ ನೀಡುವುದಿಲ್ಲ. ಈ ವಿಚಾರದಲ್ಲಿ ರಾಜ್ಯಗಳಿಗೂ ಸ್ಪಷ್ಟಪಡಿಸುತ್ತಿದ್ದೇವೆ’ ಎಂದು ತಿಳಿಸಿತು.
ಕೆಲವು ದುಷ್ಕರ್ಮಿಗಳು ನಮ್ಮ ನೋಟಿಸ್ಗಳನ್ನು ಹರಿದುಹಾಕಿದ್ದಾರೆ. ಇದುವರೆಗೂ ಯಾವುದೇ ಎಫ್ಐಆರ್ ಕೂಡ ದಾಖಲಾಗಿಲ್ಲ ಎಂದು ಚುನಾವಣಾ ಆಯೋಗವು ಸಲ್ಲಿಸಿದ ಪ್ರಮಾಣಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್, ಈ ವಿಚಾರದ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಪಶ್ಚಿಮ ಬಂಗಾಳದ ಡಿಜಿಪಿಗೆ ಸೂಚನೆ ನೀಡಿದೆ.
‘ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ’ ಎಂದು ರಾಜ್ಯದ ಪರ ಹಾಜರಾದ ವಕೀಲರು ತಿಳಿಸಿದರು.
‘ದೇಶದ ಎಲ್ಲಾ ರಾಜ್ಯಗಳಿಗೂ ಭಾರತದ ಸಂವಿಧಾನವು ಅನ್ವಯವಾಗುತ್ತದೆ ಎಂಬ ಸಂದೇಶ ತಲುಪಬೇಕು’ ಎಂದು ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೀಠದ ಗಮನಸೆಳೆದರು.
‘ಇಡೀ ಪ್ರಕ್ರಿಯೆಯನ್ನು ಸರಾಗವಾಗಿ ನಡೆಯಲು ಜಿಲ್ಲಾಧಿಕಾರಿಗಳು ನಿಗಾ ವಹಿಸುವ ಜೊತೆಗೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾನೂನು– ಸುವ್ಯವಸ್ಥೆ ಸಮಸ್ಯೆ ಉಂಟಾಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ವಹಿಸಬೇಕು’ ಎಂದು ನ್ಯಾಯಪೀಠ ಸೂಚನೆ ನೀಡಿದೆ.
ವಿಚಾರಣೆ ವೇಳೆ ಮಮತಾ ಬ್ಯಾನರ್ಜಿ ಪರ ಹಾಜರಾದ ಶ್ಯಾಮ್ ದಿವಾನ್ ವಾದ ಆಲಿಸಿದ ನ್ಯಾಯಪೀಠ, ಎಸ್ಐಆರ್ ಪ್ರಕ್ರಿಯೆಯಲ್ಲಿ ಮೈಕ್ರೋ ಅಬ್ಸರ್ವರ್ ನೇಮಕಾತಿ ಹಾಗೂ ಮತದಾರರನ್ನು ಸಾಮೂಹಿಕವಾಗಿ ಹೊರಗಿಡುವಿಕೆ ಕುರಿತು ಆತಂಕ ವ್ಯಕ್ತಪಡಿಸಿದರು.
‘ಸಾಮೂಹಿಕವಾಗಿ ತೆಗೆದು ಹಾಕುವುದನ್ನು ನಾವು ಬಯಸುವುದಿಲ್ಲ’ ದಿವಾನ್ ಸ್ಪಷ್ಟಪಡಿಸಿದರು.
ನಿಯೋಜನೆ: ಆಯೋಗವೇ ನಿರ್ಧರಿಸಲಿ
‘ಎಸ್ಐಆರ್ಗೆ 8505 ‘ಬಿ’ ಗ್ರೂಪ್ ಅಧಿಕಾರಿಗಳನ್ನು ನಿಯೋಜಿಸುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ. ಇವರಿಗೆ ತರಬೇತಿ ನೀಡಿ ಎಸ್ಐಆರ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಹುದು ಉದ್ಯೋಗ ಹಾಗೂ ಕೆಲಸದ ನಿಯೋಜನೆಯನ್ನು ಚುನಾವಣಾ ಆಯೋಗವೇ ನಿರ್ಧರಿಸಲಿದೆ. ಎಸ್ಐಆರ್ನಿಂದ ಸಮಸ್ಯೆ ಎದುರಿಸಿದ ವ್ಯಕ್ತಿಗಳು ಸಲ್ಲಿಸುವ ದಾಖಲೆಗಳ ಪರಿಶೀಲನೆಗೆ ಫೆಬ್ರುವರಿ 14ರವರೆಗೆ ವಿಧಿಸಿದ ಗಡುವನ್ನು ಒಂದು ವಾರ ವಿಸ್ತರಿಸಿದೆ. ಈ ಕುರಿತು ಮತದಾರರ ನೋಂದಣಾಧಿಕಾರಿಗಳು(ಇಆರ್ಒ) ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ನ್ಯಾಯಪೀಠ ತಿಳಿಸಿದೆ.
‘8505 ‘ಬಿ’ ಗ್ರೂಪ್ ಅಧಿಕಾರಿಗಳು ಮಂಗಳವಾರ ಸಂಜೆ 5 ಗಂಟೆ ಒಳಗಾಗಿ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಇಆರ್ಒ ಮುಂದೆ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಸ್ಪಷ್ಟಪಡಿಸಿದೆ.
‘ಈಗಾಗಲೇ ಕರ್ತವ್ಯದಲ್ಲಿರುವ ಇಆರ್ಒಗಳ ಬದಲಾವಣೆ ಹಾಗೂ ನೋಂದಣಿ ಅಧಿಕಾರಿಗಳನ್ನು ಅಗತ್ಯ ಸ್ಥಳಗಳಿಗೆ ನಿಯೋಜಿಸುವ ಸಂಪೂರ್ಣ ಅಧಿಕಾರ ಆಯೋಗಕ್ಕಿದೆ. ಮತರದಾರರ ಪಟ್ಟಿಯ ಪರಿಷ್ಕರಣೆಯ ಅಂತಿಮ ನಿರ್ಧಾರವನ್ನು ಚುನಾವಣಾ ಅಧಿಕಾರಿಗಳೇ ತೆಗೆದುಕೊಳ್ಳಲಿದ್ದಾರೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.