ಮಥುರಾ: ಯಮುನಾ ನದಿ ನೀರನ್ನು ಶುದ್ಧೀಕರಿಸದ ಹೊರತು ವೃಂದಾವನ ಕುಂಭಮೇಳದಲ್ಲಿ ನಡೆಯುತ್ತಿರುವ ಪವಿತ್ರ ‘ಶಾಹಿ ಸ್ನಾನ‘ದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೂರು ಪ್ರಮುಖ ಸ್ವಾಮೀಜಿಗಳು ನಿರ್ಧರಿಸಿದ್ದಾರೆ.
ವೃಂದಾವನ ಕುಂಭಮೇಳದ ಭಾಗವಾಗಿ ಯಮುನಾ ನದಿಯಲ್ಲಿ ಪವಿತ್ರ ಸ್ನಾನ ನಡೆಯುತ್ತಿದ್ದು, ನದಿ ನೀರು ಕಲುಷಿತವಾ ಗಿರುವ ಕಾರಣ ಮುಂದೆ ಮಾರ್ಚ್ 9, 13 ಮತ್ತು 25ರಂದು ಮೂರು ದಿನಗಳ ಕಾಲ ನಡೆಯಲಿರುವ ಉಳಿದ ‘ಶಾಹಿ ಸ್ನಾನ‘ ವನ್ನು ಬಹಿಷ್ಕರಿಸುವುದಾಗಿ ಅಯೋಧ್ಯೆ ಮೂಲದ ಮಹಾ ನಿರ್ವಾಣಿ ಅಖಾರದ ಮುಖ್ಯಸ್ಥ ಮಹಾಂತ ಧರ್ಮ್ ದಾಸ್ ಪ್ರತಿಜ್ಞೆ ಮಾಡಿದ್ದಾರೆ.
ಮಹಂತ ಧರ್ಮಮ್ ದಾಸ್ ಅವರು, ಮಹಾ ನಿರ್ಮೋಹಿ ಮತ್ತು ಮಹಾ ದಿಗಂಬರ್ ಅಖಾರಸ್ ಅವರ ಸಮ್ಮುಖದಲ್ಲಿ ಈ ಘೋಷಣೆ ಮಾಡಿದ್ದಾರೆ. ‘ಯಮುನಾ ನದಿಯಲ್ಲಿ ನೀರು ಶುದ್ಧವಾಗಿದ್ದರೆ ಮಾತ್ರ ಮುಂದಿನ 'ಶಾಹಿ ಸ್ನಾನ‘ದಲ್ಲಿ ಪಾಲ್ಗೊಳ್ಳುತ್ತೇವೆ‘ ಎಂದು ಹೇಳಿದರು.
ಮಹಂತ್ ಧರ್ಮ್ ದಾಸ್ ಅವರು, ಇಬ್ಬರು ಶ್ರೀಗಳೊಂದಿಗೆ ಯಮುನಾ ನದಿಯ ದೇವರಾ ಘಾಟ್ನಲ್ಲಿ ಪವಿತ್ರ ಸ್ನಾನ ಕೈಗೊಂಡ ನಂತರ ಈ ಹೇಳಿಕೆ ನೀಡಿದ್ದಾರೆ. ‘ಶಾಹಿ ಸ್ನಾನ‘ಕ್ಕೂ ಮುನ್ನ ಈ ಮೂರು ಶ್ರೀಗಳು ಸಂತರ ಮೆರವಣಿಗೆಯಲ್ಲಿ ಯಮುನಾ ನದಿ ತೀರಕ್ಕೆ ಆಗಮಿಸಿದರು. ಮೆರವಣಿಗೆಯ ಮಾರ್ಗದಲ್ಲಿ ಹೂವಿನ ಮಳೆಗರೆಯಲಾಯಿತು ಎಂದು ವೃಂದಾವನ ಕುಂಭಮೇಳದ ವ್ಯವಸ್ಥೆಗಳ ಮೇಲ್ವಿಚಾರಣಾ ನಿಯೋಜನಾ ಅಧಿಕಾರಿ ನಾಗೇಂದ್ರ ಪ್ರತಾಪ್ ಹೇಳಿದರು.
ಕುಂಭಮೇಳದ ಕೊನೆಯ ಪವಿತ್ರ ಸ್ನಾನ ಮಹಾಶಿವರಾತ್ರಿಯಂದು (ಮಾರ್ಚ್ 4) ನಡೆಯಲಿದ್ದು, ಗಂಗಾ, ಯಮುನಾ ಮತ್ತು ಪೌರಾಣಿಕ ನದಿ ಸರಸ್ವತಿ ಸಂಗಮ ಕ್ಷೇತ್ರ ಇದಕ್ಕೆ ಸಾಕ್ಷಿಯಾಗಲಿದೆ. ಈ ಮೂಲಕ ಅಂದು ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.