ADVERTISEMENT

ಆಧಾರ್‌ ಜೋಡಣೆ ಆಗಿರದಿದ್ದರೆ ರಾಜ್ಯಗಳ ವಿರುದ್ಧ ಕ್ರಮ: ಗಿರಿರಾಜ್‌ ಸಿಂಗ್‌

ನರೇಗಾ: ಎಬಿಪಿಎಸ್‌ ಜೊತೆ ಕಾರ್ಮಿಕರ ಖಾತೆ ಜೋಡಣೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 16:30 IST
Last Updated 2 ಜನವರಿ 2024, 16:30 IST
   

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಕಾರ್ಮಿಕರ ಜಾಬ್‌ ಕಾರ್ಡ್‌ ವಿವರಗಳು ಆಧಾರ್‌ ಆಧಾರಿತ ಪಾವತಿ ವ್ಯವಸ್ಥೆ (ಎಬಿಪಿಎಸ್‌) ಜೊತೆ ಜೋಡಣೆ ಆಗದಿದ್ದರೆ, ರಾಜ್ಯ ಸರ್ಕಾರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಹೊರತು ಕಾರ್ಮಿಕರ ವಿರುದ್ಧ ಅಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ  ಗಿರಿರಾಜ್‌ ಸಿಂಗ್‌ ಹೇಳಿದ್ದಾರೆ.

ನರೇಗಾ ಅಡಿ ವೇತನ ಪಾವತಿಗೆ ಆಧಾರ್‌ಅನ್ನು ಕಡ್ಡಾಯಗೊಳಿಸಿರುವುದನ್ನು ಕಾಂಗ್ರೆಸ್‌ ಟೀಕಿಸಿರುವುದರ ವಿರುದ್ಧ ಸಚಿವ ಗಿರಿರಾಜ್‌ ಸಿಂಗ್ ಅವರು ಕಿಡಿಕಾರಿದ್ದಾರೆ.ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಎಬಿಪಿಎಸ್‌ಅನ್ನು ಕಡ್ಡಾಯಗೊಳಿಸಿದ ಮರುದಿನವೇ ಅವರು ಈ ಕುರಿತು ಮಾತನಾಡಿದ್ದಾರೆ.

ಕೇಂದ್ರ ಸರ್ಕಾರವು ತಂತ್ರಜ್ಞಾನವನ್ನು ಆಯುಧವನ್ನಾಗಿ ಮಾಡಿಕೊಂಡಿದೆ. ವಿಶೇಷವಾಗಿ ಆಧಾರ್‌ಅನ್ನು ಬಡವರ ವಿರುದ್ಧ ಅಸ್ತ್ರವನ್ನಾಗಿಸಿಕೊಂಡಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಜೈರಾಮ್‌ ರಮೇಶ್‌) ಅವರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಗಿರಿರಾಜ್, ಎಬಿಪಿಎಸ್‌ಅನ್ನು ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ಕಡ್ಡಾಯಗೊಳಿಸಲಾಗಿದೆ ಎಂದಿದ್ದಾರೆ.

ADVERTISEMENT

‘ಎಬಿಪಿಎಸ್‌ ಜೊತೆ ಬ್ಯಾಂಕ್‌ ಖಾತೆ ಜೋಡಣೆ ಆಗದ ಕಾರ್ಮಿಕರ ವೇತನ ಪಾವತಿ ಕುರಿತು ಕೇಳಿದ ಪ್ರಶ್ನೆಗೆ, ‘ಈ ಕುರಿತು ನಾವು ರಾಜ್ಯಗಳ ಜೊತೆ ಮಾತನಾಡಲಿದ್ದೇವೆ. ಸಮಸ್ಯೆಗಳು ಕಂಡುಬಂದರೆ, ಮುಂದಿನ ಕ್ರಮಗಳ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.

ಜನವರಿ 2ಕ್ಕೆ ಅನ್ವಯಿಸಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ಒದಗಿಸಿರುವ ದತ್ತಾಂಶದ ಪ್ರಕಾರ, ಸುಮಾರು 14.32 ಕೋಟಿ ಸಕ್ರಿಯ ನರೇಗಾ ಕಾರ್ಮಿಕರಿದ್ದಾರೆ. ಅವರಲ್ಲಿ 14.08 ಕೋಟಿ (ಶೇ 98.31) ಕಾರ್ಮಿಕರ ಬ್ಯಾಕ್‌ ಖಾತೆಗಳು ಆಧಾರ್‌ಗೆ ಜೋಡಣೆ ಆಗಿವೆ. 12.54 ಕೋಟಿ ಕಾರ್ಮಿಕರು ಆಧಾರ್‌ ಆಧರಿತ ಪಾವತಿ ವ್ಯವಸ್ಥೆ ಅಡಿ ವೇತನ ಪಡೆಯಲು ಅರ್ಹರಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.