ನವದೆಹಲಿ: ‘ಒಂದು ವೇಳೆ ಕೇಂದ್ರ ಅಥವಾ ಉತ್ತರಪ್ರದೇಶ ಸರ್ಕಾರ ರಾಮಮಂದಿರನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರೆ, ಆ ಸರ್ಕಾರವನ್ನೇ ಉರುಳಿಸುತ್ತೇನೆ’ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
’ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ನನ್ನ ವಿರೋಧಿಸುವ ಪಕ್ಷಗಳಾಗಿವೆ. ಅವರಿಗೆ ನನ್ನನ್ನು ವಿರೋಧಿಸುವ ಧೈರ್ಯ ಇದೆಯೇ? ಒಂದು ವೇಳೆ ಅವರು ಹಾಗೆ ಮಾಡಿದರೆ, ನಾನು ಸರ್ಕಾರವನ್ನೇ ಬೀಳಿಸುತ್ತೇನೆ’ ಎಂದಿದ್ದಾರೆ.
ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ‘ನ್ಯಾಯಾಂಗ, ರಾಜಕೀಯ ಮತ್ತು ನಂಬಿಕೆ’ ಎನ್ನುವ ವಿಷಯದ ಕುರಿತು ಮಾತನಾಡುವ ವೇಳೆ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.
‘ನನಗೆ ಪರಿಚಯವಿರುವ ಕೆಲವು ಮುಸ್ಲೀಮರಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಬಗ್ಗೆ ಯಾವ ತಕರಾರು ಇಲ್ಲ. ಹಿಂದೂಗಳಿಗೆ ಸೇರಿದ್ದ ಆ ಭೂಮಿಯನ್ನು ಮೊಘಲ್ ದೊರೆ ಬಾಬರ್ ವಶಪಡಿಸಿಕೊಂಡಿದ್ದ ಎನ್ನುವುದನ್ನು ಸುನ್ನಿ ವಕ್ಫಾ ಮಂಡಳಿಯೂ ಒಪ್ಪಿದೆ’ ಎಂದಿದ್ದಾರೆ.
‘ರಾಮ ಜನ್ಮಭೂಮಿ ವ್ಯಾಸ ಮತ್ತು ನಿರ್ಮೋಹಿ ಅಖಾಡದ ಸದಸ್ಯರು ಹೇಳುವ ಪ್ರಕಾರ ಅಲ್ಲಿ ಎರಡು ದೇವಸ್ಥಾನಗಳಿದ್ದು, ಅವು ಅವರಿಗೆ ಸೇರಬೇಕು. 2010ರಲ್ಲಿ ಈ ವಿವಾದಿತ ಭೂಪ್ರದೇಶದ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಆ ಭೂಮಿಯನ್ನು ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಸಮನಾಗಿ ಹಂಚಿಕೆ ಮಾಡಿ ತೀರ್ಪು ನೀಡಿತ್ತು’ ಎಂದು ವಿವರಿಸಿದ್ದಾರೆ.
‘ಸಂವಿಧಾನದ ಪ್ರಕಾರ ನನಗೆ ಪ್ರಾರ್ಥನೆ ಸಲ್ಲಿಸುವ ಹಕ್ಕು ಇರುವುದರಿಂದ ನ್ಯಾಯಾಲಯ ನನ್ನ ಮನವಿ ಕೇಳಲು ಸಮ್ಮತಿಸಿದೆ. ಇಲ್ಲಿ ರಾಮನ ಜನನವಾಗಿತ್ತು ಎನ್ನುವುದು ನಮ್ಮ ನಂಬಿಕೆ. ಇಲ್ಲಿ ದೊಡ್ಡ ರಾಮಮಂದಿರ ನಿರ್ಮಿಸಲು ಬಯಸುತ್ತೇವೆ. ಆದರೆ, ಮುಸ್ಲೀಮರು ತಮ್ಮ ಜಾಗವನ್ನು (ಆಸ್ತಿಯನ್ನು) ಕೇಳುತ್ತಿದ್ದಾರೆ. ಇದು ಮೂಲಭೂತ ಹಕ್ಕಲ್ಲ. ಹೀಗಾಗಿ ಅವರ ಸಾಮಾನ್ಯ ಆಸ್ತಿ ಹಕ್ಕಿಗಿಂತ ನನ್ನ ಮೂಲಭೂತ ಹಕ್ಕಿಗೆ ಹೆಚ್ಚು ಪ್ರಧಾನ್ಯ ನೀಡಬೇಕೆಂದು ನಾನು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೇನೆ’ ಅವರು ಹೇಳಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆ ಪ್ರಕಾರ ವಿವಾದಿತ ಸ್ಥಳವಾದ ರಾಮಜನ್ಮಭೂಮಿಯಲ್ಲಿ ದೇವಾಲವಿತ್ತು ಎಂದು ಸ್ವಾಮಿ ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.