ADVERTISEMENT

ಚಳಿಗಾಲದ ಅಧಿವೇಶನಕ್ಕೆ ರಾಹುಲ್‌ ಸೇರಿ ಕಾಂಗ್ರೆಸ್‌ನ ಹಿರಿಯ ನಾಯಕರು ಗೈರು?

ಜೈರಾಮ್‌ ರಮೇಶ್‌, ದಿಗ್ವಿಜಯ ಸಿಂಗ್‌ ಸಹಿತ ಹಿರಿಯ ನಾಯಕರು ಗೈರು ಸಾಧ್ಯತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2022, 5:20 IST
Last Updated 3 ಡಿಸೆಂಬರ್ 2022, 5:20 IST
   

ನವದೆಹಲಿ: ‌ಭಾರತ್‌ ಜೋಡೊ ಯಾತ್ರೆಯಲ್ಲಿ ಮುಂದುವರಿಯುವ ಸಲುವಾಗಿ, ಡಿಸೆಂಬರ್‌ 7 ರಿಂದ ಆರಂಭವಾಗಲಿರುವ ಸಂಸತ್‌ನ ಚಳಿಗಾಲದ ಅಧಿವೇಶನಕ್ಕೆ ರಾಹುಲ್‌ ಗಾಂಧಿ ಸಹಿತ ಕಾಂಗ್ರೆಸ್‌ನ ಹಲವು ಸಂಸದರು ಗೈರಾಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ನ ಹಿರಿಯ ನಾಯಕರಾದ ಜೈರಾಮ್‌ ರಮೇಶ್‌, ದಿಗ್ವಿಜಯ ಸಿಂಗ್‌ ಮುಂತಾದ ನಾಯಕರು, ಅಧಿವೇಶನಕ್ಕೆ ಗೈರಾಗಿ ಯಾತ್ರೆಯಲ್ಲೇ ಮುಂದುವರಿಯಲಿದ್ದಾರೆ ಎಂದು ಗೊತ್ತಾಗಿದೆ.

ಭಾರತ್‌ ಜೋಡೊ ಯಾತ್ರೆ‌ಗೆ ಹೆಚ್ಚಿನ ಆದ್ಯತೆ ನೀಡಲೋಸುಗ, ಹಿರಿಯ ನಾಯಕರು ಯಾತ್ರೆಯಲ್ಲೇ ಮುಂದುವರಿಯಬೇಕು ಎಂದು ಕಾಂಗ್ರೆಸ್‌ ಹೈಕಮಾಂಡ್‌ ಬಯಸಿದೆ ಎಂದು ತಿಳಿದು ಬಂದಿದೆ.

ADVERTISEMENT

ಶನಿವಾರ ಸಂಜೆ ನಾಲ್ಕು ಗಂಟೆಗೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ, ಪಕ್ಷದ ತಂತ್ರಗಾರಿಕಾ ಸಮಿತಿಯ ಸಭೆ ನಡೆಯಲಿದ್ದು, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಇದರಲ್ಲಿ ರಾಜ್ಯಸಭೆಗೆ ನೂತನ ವಿಪಕ್ಷ ನಾಯಕನ ಆಯ್ಕೆ ಸೇರಿ ವಿವಿಧ ವಿಷಯಗಳು ಚರ್ಚೆಯಾಗುವ ಸಾಧ್ಯತೆ ಇದೆ.

ಪಕ್ಷದ ‘ಒಬ್ಬ ವ್ಯಕ್ತಿ ಒಂದು ಹುದ್ದೆ‘ ನಿಯಮ ಪಾಲಿಸಲು, ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ, ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದೀಗ ಅವರೇ ಮುಂದುವರಿಯಲಿದ್ದಾರೆ ಎಂದು ಕಾಂಗ್ರೆಸ್‌ನ ಮೂಲಗಳು ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿತ್ತು. ಅವರ ಸ್ಥಾನಕ್ಕೆ ದಿಗ್ವಿಜಯ ಸಿಂಗ್‌ ಅಥವಾ ಪಿ. ಚಿದಂಬರಂ ಕೂಡ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಗುಜರಾತ್‌ ಚುನಾವಣೆಯಿಂದಾಗಿ ಒಂದು ತಿಂಗಳು ತಡವಾಗಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಬಾರಿಯೂ ಹಳೆಯೆ ಸಂಸತ್‌ ಕಟ್ಟಡದಲ್ಲೇ ಕಲಾಪಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.