ನವದೆಹಲಿ: ನಕ್ಸಲ್ ಬಾಧಿತ ಪ್ರದೇಶ, ಛತ್ತೀಸ್ಗಡದ ದಾಂತೇವಾಡ ಜಿಲ್ಲೆಯ 25 ವರ್ಷ ವಯಸ್ಸಿನ ಮಹಿಳೆ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 12ನೇ ರ್ಯಾಂಕ್ ಬಂದಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಇತ್ತೀಚೆಗೆ ಫಲಿತಾಂಶ ಪ್ರಕಟಿಸಿದೆ.
ದಾಂತೇವಾಡದ ಗೀದಮ್ ಪಟ್ಟಣದ ನಮ್ರತಾ ಜೈನ್ ಈ ಸಾಧನೆ ಮಾಡಿದವರು. 2016ರ ಯುಪಿಎಸ್ಸಿ ಪರೀಕ್ಷೆಯಲ್ಲಿ 99ನೇ ರ್ಯಾಂಕ್ ಪಡೆದಿದ್ದ ನಮ್ರತಾ, ಐಪಿಎಸ್ಗೆ ಅರ್ಹತೆ ಪಡೆದಿದ್ದರು. ಸದ್ಯ ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
‘ನಾನು 8ನೇ ತರಗತಿಯಲ್ಲಿದ್ದಾಗ ಮಹಿಳಾ ಅಧಿಕಾರಿಯೊಬ್ಬರು ನನ್ನ ಶಾಲೆಗೆ ಬಂದಿದ್ದರು. ಅವರು ಜಿಲ್ಲಾಧಿಕಾರಿ ಎಂದು ತಿಳಿದು, ಅವರಿಂದ ಪ್ರಭಾವಿತಳಾಗಿದ್ದೆ. ನಾನು ಜಿಲ್ಲಾಧಿಕಾರಿಯಾಗಬೇಕು ಎಂದುಅಂದೇ ನಿರ್ಧರಿಸಿದ್ದೆ’ ಎಂದು ನಮ್ರತಾ ಹೇಳುತ್ತಾರೆ.
‘ಹಲವು ವರ್ಷಗಳ ಹಿಂದೆ ನನ್ನ ಪಟ್ಟಣದಲ್ಲಿಯೇ ಪೊಲೀಸ್ ಠಾಣೆಯನ್ನು ನಕ್ಸಲರು ಸ್ಫೋಟಿಸಿದ್ದರು. ಬಡವರ ಸೇವೆ ಹಾಗೂ ಅವರ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂಬ ನನ್ನ ಆಸೆಗೆ ಈ ಘಟನೆಯೇ ಪ್ರೋತ್ಸಾಹ ನೀಡಿತು. ದಾಂತೇವಾಡದಲ್ಲಿ ನಕ್ಸಲ್ ನಿರ್ಮೂಲನೆ ಮಾಡಲು ಶಿಕ್ಷಣದ ಮೂಲಕ ಅಭಿವೃದ್ಧಿ ಮಾಡುವುದು ಅಗತ್ಯವಿದೆ’ ಎಂದು ಹೇಳುವ ಅವರು, ಈ ಬಾರಿ ಸಾರ್ವಜನಿಕ ಆಡಳಿತ ಸೇವೆಗೆ ಅರ್ಹತೆ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.