ADVERTISEMENT

ಮಹಾಡ್‌ನಲ್ಲಿ ಕಟ್ಟಡ ಕುಸಿತ: 15 ಮಂದಿ ಸಾವು, ರಕ್ಷಣಾ ಕಾರ್ಯ ಸ್ಥಗಿತ

ಪಿಟಿಐ
Published 26 ಆಗಸ್ಟ್ 2020, 8:29 IST
Last Updated 26 ಆಗಸ್ಟ್ 2020, 8:29 IST
ರಕ್ಷಣಾ  ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆ   

ಮುಂಬೈ: ಮಹಾರಾಷ್ಟ್ರದರಾಯಗಡ ಜಿಲ್ಲೆಯಲ್ಲಿಸೋಮವಾರ ರಾತ್ರಿ ಐದು ಮಹಡಿಗಳ ಕಟ್ಟಡ ಕುಸಿದು ಬಿದ್ದಿದ್ದು ಇಲ್ಲಿಯವರೆಗೆ15 ಮಂದಿಯ ಮೃತದೇಹ ಹೊರ ತೆಗೆಯಲಾಗಿದೆ.

ಕಟ್ಟಡ ಕುಸಿತ ಸಂಭವಿಸಿದಾಗ 17 ಮಂದಿ ಅವಶೇಷಗಳಡಿ ಸಿಲುಕಿದ್ದರು. ಇದರಲ್ಲಿ ಇಬ್ಬರನ್ನು ರಕ್ಷಿಸಿದ್ದು 15 ಮಂದಿಯ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಹಾಗಾಗಿಬುಧವಾರ ಬೆಳಗ್ಗೆ 11.30ರ ಹೊತ್ತಿಗೆ ರಕ್ಷಣಾ ಕಾರ್ಯ ಸ್ಥಗಿತಗೊಳಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈ ಘಟನೆಯಲ್ಲಿ ಗಾಯಗೊಂಡ 9 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಕಟ್ಟಡ ಕುಸಿದು ಬಿದ್ದು ಅವಶೇಷಗಳಡಿ ಸಿಲುಕಿದ್ದ 60ರ ಹರೆಯದ ಮೆಹರುನ್ನಿಸ್ಸಾ ಅಬ್ದುಲ್ ಹಮೀದ್ ಕಾಝಿ ಎಂಬಮಹಿಳೆಯನ್ನು 26 ಗಂಟೆಗಳ ನಂತರ ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.

ಇದಕ್ಕಿಂತ ಮುನ್ನ 19 ಗಂಟೆಗಳ ಕಾಲ ಅವಶೇಷದಡಿಯಲ್ಲಿದ್ದ ನಾಲ್ಕರ ಹರೆಯದ ಬಾಲಕನನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಿಸಿತ್ತು.

ಮುುಂಬೈನಿಂದ 170 ಕಿಮೀ ದೂರದಲ್ಲಿರುವ ಮಹಾಡ್ ನಗರದಲ್ಲಿ ನಡೆದ ಈ ಘಟನೆಯಲ್ಲಿ 13 ಮಂದಿ ಸಾವಿಗೀಡಾಗಿದ್ದಾರೆ. 12 ಮಂದಿಯ ಮೃತದೇಹವನ್ನು ಮಂಗಳವಾರ ರಾತ್ರಿ ಹೊರತೆಗೆಯಲಾಗಿದೆ. 9 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

7 ವರ್ಷದ ಹಿಂದೆ ನಿರ್ಮಿಸಿದ್ದ 45 ವಸತಿಗಳಿರುವ ಐದು ಅಂತಸ್ತಿನ ಸಮುಚ್ಚಯ ಸೋಮವಾರ ಸಂಜೆ ಕುಸಿದು ಬಿದ್ದಿತ್ತು. ಕಟ್ಟಡದ ಗುತ್ತಿಗೆದಾರ ಮತ್ತು ವಾಸ್ತುಶಿಲ್ಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

2013ರಲ್ಲಿ ನಾವು ಇಲ್ಲಿ ವಾಸಿಸಲು ಬಂದಾಗಿನಿಂದ ಗಮನಿಸಿದ್ದೇವೆ. ಕಟ್ಟಡದ ನಿರ್ಮಾಣ ರೀತಿ ಕಳಪೆಯಾಗಿದ್ದು, ಮೇಲ್ಪದರ ಕಿತ್ತು ಬರುತ್ತಿತ್ತು. ನಂತರದ ಎರಡು ವರ್ಷಗಳಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾದಾಗ ನಾವು ಬಿಲ್ಡರ್‌ನ್ನು ಭೇಟಿಯಾದೆವು. ಆದರೆ ಅವರು ರಿಪೇರಿ ಮಾಡಲು ಹಿಂಜರಿದರು.ನಾವು ಕಟ್ಟಡ ನಿರ್ಮಿಸಿ ನಿಮಗೆ ನೀಡಿದ್ದೇವೆ. ಇನ್ನು ಮುಂದೆ ಏನು ಮಾಡಬೇಕು ಎಂಬುದು ನಿಮಗೆ ಬಿಟ್ಟಿದ್ದು ಎಂದಿದ್ದರು. ನಾನು ಕಟ್ಟಡ ಕುಸಿದು ಬೀಳುತ್ತಿದ್ದಂತೆ ಓಡಿ ಪಾರಾದೆ ಎಂದು ಅದೇ ಕಟ್ಟಡದ ನಿವಾಸಿ ಮುಸ್ತಾಫವ್ ಚಫೇಕರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಸಾವಿಗೀಡಾದ ವ್ಯಕ್ತಿಗಳ ಕುಟುಂಬಕ್ಕೆ ₹5 ಲಕ್ಷಪರಿಹಾರ ಧನ ಮತ್ತು ಗಾಯಗೊಂಡವರಿಗೆ ₹50,000 ಧನ ಸಹಾಯ ನೀಡುವುದಾಗಿ ಮಹಾರಾಷ್ಟ್ರದ ಸಚಿವ ವಿಜಯ್ ವಾಡೆಟ್ಟಿವಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.