ನವದೆಹಲಿ: ಭಾರತಕ್ಕೆ ಭೇಟಿ ನೀಡಿದ್ದ ಅಫ್ಗಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರ ಸುದ್ದಿಗೋಷ್ಠಿಗೆ ಪತ್ರಕರ್ತೆಯರಿಗೆ ಅವಕಾಶ ನೀಡದಿರುವ ವಿಚಾರ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಶನಿವಾರ ಜಟಾಪಟಿಗೆ ಕಾರಣವಾಗಿದೆ.
ಈ ವಿಚಾರ ಮುಂದಿಟ್ಟುಕೊಂಡು ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ವಿರುದ್ಧ ಹರಿಹಾಯ್ದಿದ್ದು, ‘ಈ ರೀತಿ ಸುದ್ದಿಗೋಷ್ಠಿ ನಡೆಸಿರುವುದು ಆಘಾತಕಾರಿ ಹಾಗೂ ಒಪ್ಪಲು ಸಾಧ್ಯವಿಲ್ಲ. ಇದು ಪ್ರತಿಗಾಮಿ ನಡೆ’ ಎಂದಿವೆ.
‘ಪತ್ರಕರ್ತೆಯರನ್ನು ದೂರ ಇಟ್ಟು ಸುದ್ದಿಗೋಷ್ಠಿ ನಡೆಸಲು ಅವಕಾಶ ನೀಡಲಾಗಿದೆ. ನಿಮ್ಮ ಪರವಾಗಿ ನಿಲ್ಲಲಾರದಷ್ಟು ತಾನು ದುರ್ಬಲ ಎಂಬುದಾಗಿ ಮೋದಿಯವರು ಭಾರತೀಯ ಮಹಿಳೆಯರಿಗೆ ಹೇಳಿದಂತಾಗಿದೆ’ ಎಂದೂ ವಿಪಕ್ಷಗಳು ವಾಗ್ದಾಳಿ ನಡೆಸಿವೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ, ಸಚಿವ ಮುತ್ತಾಕಿ ಅವರು ಇಲ್ಲಿನ ಅಫ್ಗಾನಿಸ್ತಾನ ರಾಯಭಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದರು. ಪತ್ರಕರ್ತೆಯರನ್ನು ಹೊರತುಪಡಿಸಿ ಕೆಲವೇ ಪುರುಷ ವರದಿಗಾರರಿಗೆ ಮಾತ್ರ ಸುದ್ದಿಗೋಷ್ಠಿಗೆ ಅವಕಾಶ ನೀಡಲಾಗಿತ್ತು.
‘ಈ ಘಟನೆ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿರುವುದನ್ನು ತೋರಿಸುತ್ತದೆ. ಮಹಿಳೆಯರ ಕುರಿತ ಇಂಥ ಧೋರಣೆ ಮೋದಿ ನೇತೃತ್ವದ ಸರ್ಕಾರದಲ್ಲಿ ಸಾಮಾನ್ಯವಾಗಿದೆ’ ಎಂದು ಕಾಂಗ್ರೆಸ್ ಪಕ್ಷ ತನ್ನ ‘ಎಕ್ಸ್’ ಖಾತೆಯಲ್ಲಿ ಟೀಕಿಸಿದೆ.
ಮಹಿಳೆಯರು ಪ್ರತಿಯೊಂದು ವೇದಿಕೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿ ಹಕ್ಕು ಹೊಂದಿದ್ದಾರೆ. ಈಗ ಕಂಡುಬಂದಿರುವ ತಾರತಮ್ಯದ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ. ನಾರಿ ಶಕ್ತಿ ಕುರಿತ ನಿಮ್ಮ ಘೋಷಣೆಗಳು ಟೊಳ್ಳು ಎಂಬುದನ್ನು ಈ ಘಟನೆ ಜಗಜ್ಜಾಹೀರು ಮಾಡಿದೆರಾಹುಲ್ ಗಾಂಧಿ ಲೋಕಸಭೆಯಲ್ಲಿ ವಿಪಕ್ಷ ನಾಯಕ
ಭಾರತದಲ್ಲಿ ಮಹಿಳಾ ಪತ್ರಕರ್ತರನ್ನು (ತಾಲಿ)ಬ್ಯಾನ್ (ನಿಷೇಧ) ಮಾಡಲಾಗಿದೆ. ಅಂತರರಾಷ್ಟ್ರೀಯ ಹೆಣ್ಣು ಮಗು ದಿನದಂದು ದೇಶದ ರಾಜಧಾನಿ ನವದೆಹಲಿಯಲ್ಲಿಯೇ ಇಂತಹ ನಡೆಗೆ ಭಾರತ ಸರ್ಕಾರ ಒಪ್ಪಿಗೆ ನೀಡಿದ್ದು ಆಘಾತಕಾರಿ ಮತ್ತು ಸ್ವೀಕಾರಾರ್ಹವಲ್ಲಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಈ ಘಟನೆ ಬಗ್ಗೆ ತಿಳಿದು ನನಗೆ ಆಘಾತವಾಗಿದೆ. ತಮ್ಮ ಮಹಿಳಾ ಸಹೋದ್ಯೋಗಿಗಳಿಗೆ ಅವಕಾಶ ನೀಡದಿರುವುದನ್ನು ಪ್ರತಿಭಟಿಸಿ ಪುರುಷ ಪತ್ರಕರ್ತರು ಸುದ್ದಿಗೋಷ್ಠಿಯನ್ನು ಬಹಿಷ್ಕರಿಸಬೇಕಿತ್ತುಪಿ.ಚಿದಂಬರಂ ಕಾಂಗ್ರೆಸ್ನ ಹಿರಿಯ ಸಂಸದ
ಈ ಘಟನೆ ಮೂಲಕ ಭಾರತ ತನ್ನ ನೈತಿಕ ಹಾಗೂ ರಾಜತಾಂತ್ರಿಕ ನಿಲುವಿನಲ್ಲಿ ರಾಜಿ ಮಾಡಿಕೊಂಡಿದೆ. ಇದು ಶಿಷ್ಟಾಚಾರದಲ್ಲಿ ಲೋಪವಷ್ಟೆ ಅಲ್ಲ ಸಾಂಕೇತಿಕವಾದ ಶರಣಾಗತಿಯೂ ಆಗಿದೆಮನೋಜ್ ಕೆ.ಝಾ ಆರ್ಜೆಡಿ ರಾಜ್ಯಸಭಾ ಸಂಸದ
ಇದು ಭಾರತದ ವಿದೇಶಾಂಗ ನೀತಿಯಲ್ಲಿನ ವೈಫಲ್ಯ. ಈ ಘಟನೆ ಅಂತರರಾಷ್ಟ್ರೀಯ ಮಹತ್ವದ ತಂತ್ರಗಾರಿಕೆ ಒಳಗೊಂಡ ರಾಜತಾಂತ್ರಿಕತೆಯನ್ನು ತೋರದು. ಮೋದಿ ನೇತೃತ್ವದ ದುರ್ಬಲ ಸರ್ಕಾರ ಶರಣಾಗಿರುವುದನ್ನು ತೋರಿಸುತ್ತದೆಸಾಗರಿಕಾ ಘೋಷ್ ಟಿಎಂಸಿ ರಾಜ್ಯಸಭಾ ಸದಸ್ಯೆ
ಮಹಿಳೆಯರು ಈ ದೇಶದ ಬೆನ್ನೆಲುಬು ಹಾಗೂ ಹೆಮ್ಮೆ. ದೇಶದ ಅತ್ಯಂತ ಸಮರ್ಥ ಮಹಿಳೆಯರನ್ನು ಅವಮಾನಿಸುವ ಇಂತಹ ನಡೆಗೆ ಹೇಗೆ ಅವಕಾಶ ಮಾಡಿಕೊಡಲಾಯಿತು? ಈ ಘಟನೆ ಕುರಿತು ಪ್ರಧಾನಿ ಮೋದಿ ತಮ್ಮ ನಿಲುವು ಸ್ಪಷ್ಟಪಡಿಸಬೇಕುಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಸಂಸದೆ
ಅಫ್ಗಾನಿಸ್ತಾನದಲ್ಲಿರುವ ತಾಲಿಬಾನ್ ನೇತೃತ್ವದ ಸರ್ಕಾರದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸುವ ತಂತ್ರದ ಭಾಗವಾಗಿ ಕೇಂದ್ರ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿರಬಹುದು. ಆದರೆ ಉದ್ದೇಶಪೂರ್ವಕವಾಗಿ ಪತ್ರಕರ್ತೆಯರಿಗೆ ಅವಕಾಶದೆಹಲಿ ಪತ್ರಕರ್ತರ ಸಂಘ
ಪ್ರತಿಗಾಮಿ ತಾರತಮ್ಯದಿಂದ ಕೂಡಿದಂತಹ ಇಂತಹ ಮನವಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಸಚಿವ ಎಸ್.ಜೈಶಂಕರ್ ಒಪ್ಪಿದ್ದಾದರೂ ಹೇಗೆ? ಇದು ರಾಜತಾಂತ್ರಿಕತೆಯಲ್ಲ ಇದು ದೇಶದ ಸಮಗ್ರತೆಯ ಸಂಪೂರ್ಣ ಶರಣಾಗತಿಕನಿಮೊಳಿ, ಡಿಎಂಕೆ ಸಂಸದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.