ನವದೆಹಲಿ: ಬಿಜೆಪಿ ನಾಯಕಿ ಇಮಾರ್ತಿ ದೇವಿ ಅವರ ಬಗ್ಗೆ ಗೇಲಿ ಮಾಡಿದ್ದ ವಿಚಾರವಾಗಿ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಕಮಲನಾಥ್, ಅದು ರಾಹುಲ್ ಗಾಂಧಿಯವರ ಅಭಿಪ್ರಾಯ. ಯಾರನ್ನೂ ಅವಮಾನಿಸುವ ಉದ್ದೇಶವಿಲ್ಲದ ಮೇಲೆ ನಾನೇಕೆ ಕ್ಷಮೆ ಕೇಳಬೇಕು ಎಂದು ತಿಳಿಸಿದ್ದಾರೆ.
ಈ ಕುರಿತು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, 'ಇದು ರಾಹುಲ್ ಗಾಂಧಿಯವರ ಅಭಿಪ್ರಾಯ. ಆ ಹೇಳಿಕೆಯನ್ನು ನೀಡಿದ ಸಂದರ್ಭವನ್ನು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಯಾರನ್ನೂ ಅವಮಾನಿಸುವ ಉದ್ದೇಶವಿಲ್ಲದಿದ್ದಾಗ ನಾನು ಯಾಕೆ ಕ್ಷಮೆಯಾಚಿಸಬೇಕು? ನನ್ನ ಹೇಳಿಕೆಯಿಂದಾಗಿ ಯಾರಾದರೂ ಅವಮಾನಕ್ಕೊಳಗಾಗಿದ್ದರೆ, ನಾನು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.
ಮೂರು ದಿನಗಳ ಕೇರಳ ಭೇಟಿಯಲ್ಲಿರುವ ರಾಹುಲ್ ಗಾಂಧಿ ಇಂದು, 'ಕಮಲ್ ನಾಥ್ ಜಿ ನನ್ನ ಪಕ್ಷದವರೇ ಆಗಿದ್ದಾರೆ. ಆದರೆ ವೈಯಕ್ತಿಕವಾಗಿ, ಅವರು ಬಳಸಿರುವ ಭಾಷೆ ನನಗೆ ಇಷ್ಟವಿಲ್ಲ. ಅವರು ಯಾರಾದರೂ ಸರಿಅಂತಹ ಹೇಳಿಕೆಯನ್ನು ಪ್ರಶಂಸಿಸುವುದಿಲ್ಲ, ಅವರು ಹಾಗೆಂದದ್ದು ದುರದೃಷ್ಟಕರ' ಎಂದು ಹೇಳಿದ್ದರು.
ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು, ನಾನು ಅಗೌರವ ತೋರುವ ಹಾಗೆ ಏನನ್ನೂ ಹೇಳಿಲ್ಲ. ನಾನು ಮಹಿಳೆಯರನ್ನು ಗೌರವಿಸುತ್ತೇನೆ. ಇದನ್ನು ಯಾರಾದರೂ ಇದು ಅಗೌರವ ಎಂದು ಭಾವಿಸಿದರೆ, ನಾನು ವಿಷಾದಿಸುತ್ತೇನೆ' ಎಂದು ಸಮರ್ಥಿಸಿಕೊಂಡಿದ್ದಾರೆ.
ದಬ್ರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಪರ ಭಾನುವಾರ ಪ್ರಚಾರ ಕೈಗೊಂಡಿದ್ದ ಕಮಲನಾಥ್, 'ನಮ್ಮ ಅಭ್ಯರ್ಥಿ ಅತ್ಯಂತ ಸರಳ ವ್ಯಕ್ತಿ. ಅವರಂತೆ (ಇಮಾರ್ತಿ ದೇವಿ) ಐಟಂ' ಅಲ್ಲ ಎಂದು ಗೇಲಿ ಮಾಡಿದ್ದರು. ಈ ಕ್ಷೇತ್ರದಲ್ಲಿ ಇಮಾರ್ತಿ ದೇವಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. 'ಐಟಂ' ಹೇಳಿಕೆಯ ಬಗ್ಗೆ ಬಿಜೆಪಿ ನಾಯಕರು ಹಾಗೂ ಮಹಿಳಾ ಆಯೋಗದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.