ನವದೆಹಲಿ: ನಾಗರಿಕರು ನಶಿಸಿ ಹೋಗುತ್ತಿರುವ ಸಸ್ಯ ಸಂಪತ್ತು ಮತ್ತು ಪ್ರಾಣಿಗಳು ಅಭಿವೃದ್ಧಿ ಹೊಂದುವಂತೆ ನೋಡಿಕೊಳ್ಳಬೇಕು ಎಂದು ವಿಶ್ವ ಪರಿಸರ ದಿನಾಚರಣೆಯಂದು, ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ವಿಶ್ವ ಪರಿಸರ ದಿನದಂದು, ನಮ್ಮ ಗ್ರಹದ ಸಮೃದ್ಧ ಜೀವವೈವಿಧ್ಯತೆಯನ್ನು ಕಾಪಾಡುವ ಪ್ರತಿಜ್ಞೆಯನ್ನು ನಾವು ಪುನರುಚ್ಚರಿಸಬೇಕಿದೆ. ಭೂಮಿಯನ್ನು ಹಂಚಿಕೊಳ್ಳುವ ಸಸ್ಯ ಸಂಪತ್ತು ಮತ್ತು ಪ್ರಾಣಿಗಳು ಸಮೃದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾದಷ್ಟು ಒಟ್ಟಾಗಿ ಕೆಲಸ ಮಾಡಬೇಕು. ಮುಂಬರುವ ಪೀಳಿಗೆಗೆ ಇನ್ನಷ್ಟು ಉತ್ತಮವಾದ ಭೂಮಿಯನ್ನು ಬಿಟ್ಟುಕೊಡಬೇಕು ಎಂದು ತಿಳಿಸಿದ್ದಾರೆ.
ಅಲ್ಲದೆ, ತಮ್ಮ ಕೊನೆಯ ಮನದ ಮಾತು ಸಂಚಿಕೆಯ ಭಾಗವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಮಳೆನೀರಿನ ಸಂರಕ್ಷಣೆ ಮತ್ತು ಪ್ರಕೃತಿಯ ಸಮೃದ್ಧ ವೈವಿಧ್ಯತೆಯನ್ನು ರಕ್ಷಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
'ಜೂನ್ 5 ರಂದು ಇಡೀ ಜಗತ್ತು 'ವಿಶ್ವ ಪರಿಸರ ದಿನ' ವನ್ನು ಆಚರಿಸಲಿದೆ. ಈ ವರ್ಷದ 'ವಿಶ್ವ ಪರಿಸರ ದಿನ'ದ ವಿಷಯವೆಂದರೆ ಜೈವಿಕ ವೈವಿಧ್ಯತೆ. ಸದ್ಯದ ಪರಿಸ್ಥಿತಿಯಲ್ಲಿನ ವಿಚಾರಗಳಿಗೆ ಈ ಥೀಮ್ ಬಹಳ ವಿಶೇಷವಾಗಿದೆ. ಕಳೆದ ಕೆಲವು ವಾರಗಳ ಲಾಕ್ಡೌನ್ ಸಮಯದಲ್ಲಿ ಜೀವನದ ವೇಗವು ಸ್ವಲ್ಪ ನಿಧಾನವಾಗಬಹುದು ಆದರೆ ಪ್ರಕೃತಿಯ ಸಮೃದ್ಧ ವೈವಿಧ್ಯತೆ ಅಥವಾ ನಮ್ಮ ಸುತ್ತಲಿನ ಜೀವವೈವಿಧ್ಯತೆಯ ಬಗ್ಗೆ ಆತ್ಮಾವಲೋಕನ ಮಾಡಲು ನಮಗೆ ಅವಕಾಶ ನೀಡಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
'ಶಬ್ದ ಮತ್ತು ವಾಯುಮಾಲಿನ್ಯದಿಂದಾಗಿ ಹೆಚ್ಚಿನ ಪಕ್ಷಿ ಸಂಕುಲಗಳು ಕಣ್ಮರೆಯಾಗಿವೆ. ಆದರೆ ಈಗ ವರ್ಷಗಳ ನಂತರ ಜನರು ತಮ್ಮ ಮನೆಗಳಲ್ಲಿಯೇ ಅವುಗಳ ಸುಮಧುರ ಚಿಲಿಪಿಲಿಯನ್ನು ಮತ್ತೊಮ್ಮೆ ಕೇಳಬಹುದಾಗಿದೆ' ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಸ್ಮಶಾನ ವನದ ಸಸ್ಯ ಸಂಪತ್ತು ರೂವಾರಿ ಜೀತ್ ಮಿಲನ್
'ನೀರಿನ ಸಂರಕ್ಷಣೆ, ವಿಶೇಷವಾಗಿ ಮಳೆನೀರಿನ ಸಂರಕ್ಷಣೆ ಅತ್ಯಗತ್ಯ ಮತ್ತು ಮುಂಬರುವ ಮಳೆಗಾಲದಲ್ಲಿ ಮಳೆನೀರನ್ನು ಉಳಿಸಲು ಶ್ರಮಿಸುವಂತೆ ಪ್ರತಿಯೊಬ್ಬರು ಮುಂದಾಗಬೇಕು' ಎಂದು ಪ್ರಧಾನಿ ಮನವಿ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.