ಮುಂಬೈ: ರಷ್ಯಾ–ಉಕ್ರೇನ್ ಮತ್ತು ಇರಾನ್–ಇಸ್ರೇಲ್ ಯುದ್ಧಗಳು ವಿಶ್ವದ ಮೂರನೇ ಮಹಾಯುದ್ಧದತ್ತ ತಳ್ಳುತ್ತಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಜಗತ್ತಿನಾದ್ಯಂತ ಸಂಘರ್ಷದ ವಾತಾವರಣವಿದೆ. ಯಾವಾಗ ಬೇಕಾದರೂ ಜಗತ್ತನ್ನು ಮತ್ತೊಂದು ಮಹಾಯುದ್ಧದತ್ತ ತಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾಗತಿಕ ಮಹಾಶಕ್ತಿಗಳ ಸರ್ವಾಧಿಕಾರ ಹಾಗೂ ನಿರಂಕುಶವಾದದಿಂದ ಸಮನ್ವಯ, ಸಾಮರಸ್ಯ ಹಾಗೂ ಪ್ರೀತಿ ಕಣ್ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತವು ಸತ್ಯ, ಅಹಿಂಸೆ ಹಾಗೂ ಶಾಂತಿಯ ಸಂದೇಶವನ್ನು ಜಗತ್ತಿಗೆ ಸಾರಿದ ಭಗವಾನ್ ಗೌತಮ ಬುದ್ಧನ ನಾಡು. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿ, ಪರಿಶೀಲಿಸಿ ಭವಿಷ್ಯದ ನೀತಿಗಳನ್ನು ರೂಪಿಸಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.
ಸುಧಾರಿತ ತಂತ್ರಜ್ಞಾನದಿಂದಾಗಿ ಯುದ್ಧದ ಆಯಾಮ ಬದಲಾಗಿದೆ. ಕ್ಷಿಪಣಿ ಹಾಗೂ ಡ್ರೋನ್ಗಳ ಬಳಕೆ ಹೆಚ್ಚಾಗಿದೆ. ಯುದ್ಧ ಟ್ಯಾಂಕರ್ಗಳು ಹಾಗೂ ವಿಮಾನಗಳ ಬಳಕೆ ಕಡಿಮೆಯಾಗುತ್ತಿದೆ. ಯುದ್ಧಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಗತಿಯು ಮಾನವೀಯತೆಯನ್ನು ರಕ್ಷಿಸಿಕೊಳ್ಳುವುದನ್ನು ಕಠಿಣಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.