ತಗ್ಗು ಪ್ರದೇಶಗಳಿಗೆ ನೀರು ತುಂಬಿದ ಪರಿಣಾಮ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿದರು
ರಾಯಿಟರ್ಸ್ ಚಿತ್ರ
ನವದೆಹಲಿ: ಎಡಬಿಡದೆ ಸುರಿದ ಮಳೆಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬೀದಿಗಳು ಹೊಳೆಯಂತಾಗಿದ್ದು, ಮಾರುಕಟ್ಟೆ ಪ್ರದೇಶಗಳು ನೀರಿನಿಂದ ಜಲಾವೃತಗೊಂಡಿವೆ.
ತಗ್ಗು ಪ್ರದೇಶಗಳಲ್ಲಿರುವ ಮನೆಗಳು ನೀರಿನಲ್ಲಿ ಮುಳುಗಿದ ಪರಿಣಾಮ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ನದಿ ನೀರಿನ ಮಟ್ಟ ಹೆಚ್ಚುತ್ತಿದ್ದ ಕಾರಣ ಬುಧವಾರ ಮಧ್ಯಾಹ್ನ ಅಧಿಕಾರಿಗಳು ಜನರನ್ನು ಸ್ಥಳಾಂತರ ಮಾಡಿದ್ದು, ಹಳೆಯ ರೈಲ್ವೆ ಸೇತುವೆಯನ್ನು ಬಂದ್ ಮಾಡಿದ್ದಾರೆ.
ಅನುಪ್ ಥಾಪಾ ಎನ್ನುವವರು ಮಾತನಾಡಿ, ‘ನಾವು ಬಹುತೇಕ ಸಾಮಗ್ರಿಗಳನ್ನು ತೆಗೆದುಕೊಂಡು ಬಂದಿದ್ದೇವೆ, ಆದರೆ ಕೆಲವು ವಸ್ತುಗಳು ನೀರಿನ ಪಾಲಾಗಿದೆ. ನೀರಿನ ಮಟ್ಟ ಇಳಿಕೆಯಾದ ಮೇಲೆ ನಮ್ಮ ಅಂಗಡಿಗಳನ್ನು ಮತ್ತೆ ದುರಸ್ಥಿ ಮಾಡಿಕೊಳ್ಳಬೇಕು, ಅದರ ವೆಚ್ಚ ನಮಗೆ ಹೊರೆಯಾಗಲಿದೆ’ ಎಂದು ಬೇಸರಿಸಿದ್ದಾರೆ.
ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ರಸ್ತೆ ಪಕ್ಕದಲ್ಲಿನ ಶಿಬಿರಕ್ಕೆ ಥಾಪಾ ಅವರ ಕುಟುಂಬ ಸ್ಥಳಾಂತರಗೊಂಡಿದೆ. ‘2023ರಲ್ಲೂ ನಾವು ಇದೇ ಪರಿಸ್ಥಿತಿಯನ್ನು ಎದುರಿಸಿದ್ದೆವು. ಬೀದಿಯನ್ನು ಸ್ವಚ್ಛಗೊಳಿಸಿ, ಪ್ರವಾಹದ ನೀರು ಹರಿದುಹೋಗುವಂತೆ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇವೆ’ ಎನ್ನುತ್ತಾರೆ ಥಾಪಾ.
ಮದನ್ಪುರ್ ಖಾದರ್ ಪ್ರದೇಶದಲ್ಲಿರುವ ಹಲವು ಕುಟುಂಬಗಳು ಮನೆಯನ್ನು ಕಳೆದುಕೊಂಡಿವೆ. ಈ ಬಗ್ಗೆ ಮಾತನಾಡಿದ ಅಲ್ಲಿಯ ನಿವಾಸಿ ತಯಾರಾ ಎನ್ನುವವರು ಮಾತನಾಡಿ, ‘ನಮ್ಮ ಎಲ್ಲಾ ವಸ್ತುಗಳು ಮನೆಯೊಳಗೇ ಇವೆ. ಕೆಲವು ಅಗತ್ಯ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಬರಲು ಸಾಧ್ಯವಾಯಿತು. ಶೌಚಾಲಯದ ಕೊರತೆಯಿಂದ ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.
‘ಮನೆ ತೊರೆದು ಬಂದಿರುವ ನಮಗೆ ಸರಿಯಾದ ಆಹಾರ ಸಿಗುತ್ತಿಲ್ಲ. ಬನ್, ಬಿಸ್ಕತ್ತು ತಿನ್ನುತ್ತಿದ್ದೇವೆ. ಮನೆಯಲ್ಲಿದ್ದ ಅಡುಗೆ ಸಾಮಗ್ರಿಗಳನ್ನು ತರಲು ಸಾಧ್ಯವಾಗಲಿಲ್ಲ, ಈಗ ಆಹಾರ ತಯಾರಿಸಲು ಯಾವುದೇ ಸೌಲಭ್ಯವಿಲ್ಲ. ಗೂಡಂಗಡಿಗಳಲ್ಲಿ ಸಿಗುವ ಆಹಾರ ತಿನ್ನುತ್ತಿದ್ದೇವೆ’ ಎಂದು ಮತ್ತೊಬ್ಬ ನಿವಾಸಿ ದುಃಖಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.