ಲಖನೌ:ಉತ್ತರ ಪ್ರದೇಶದ ನೂತನ ಸಚಿವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಖಾತೆ ಹಂಚಿಕೆ ಮಾಡಿದ್ದಾರೆ. ಆದರೆ ಬಹುಪಾಲು ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಗೃಹ, ವಿಚಕ್ಷಣೆ, ಕಂದಾಯ, ಪ್ರಧಾನ ಆಡಳಿತ, ಮಾಹಿತಿ, ಎಸ್ಟೇಟ್ ಅಭಿವೃದ್ಧಿ, ಸಾಂಸ್ಥಿಕ ಹಣಕಾಸು, ಸಚಿವಾಲಯ ಆಡಳಿತ, ಗಣಿಗಾರಿಕೆ, ಆಹಾರ ಭದ್ರತೆ, ನಿವೇಶನ, ನಾಗರಿಕ ವಿಮಾನಯಾನ ಕಾನೂನು ಸೇರಿದಂತೆ ಅನೇಕ ಖಾತೆಗಳನ್ನು ಮುಖ್ಯಮಂತ್ರಿಯೇ ಉಳಿಸಿಕೊಂಡಿದ್ದಾರೆ.
ಉಪ ಮುಖ್ಯಮಂತ್ರಿ ಕೇಶವ ಮೌರ್ಯ ಅವರಿಗೆ ಗ್ರಾಮೀಣಾಭಿವೃದ್ಧಿ, ರೂರಲ್ ಎಂಜಿನಿಯರಿಂಗ್, ಆಹಾರ ಸಂಸ್ಕರಣೆ ಮತ್ತು ಮನರಂಜನಾ ತೆರಿಗೆ ಖಾತೆಗಳನ್ನು ನೀಡಲಾಗಿದೆ. ಈ ಹಿಂದಿನ ಅವಧಿಯಲ್ಲಿ ಲೋಕೋಪಯೋಗಿ ಸಂಬಂಧಿತ ಎಲ್ಲ ಖಾತೆಗಳು ಮೌರ್ಯ ಬಳಿ ಇತ್ತು.
ಮತ್ತೊಬ್ಬ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರಿಗೆ ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಸುರೇಶ್ ಖನ್ನಾ ಅವರಿಗೆ ಸಂಸದೀಯ ವ್ಯವಹಾರ, ಹಣಕಾಸು ಖಾತೆಗಳನ್ನು ನೀಡಲಾಗಿದೆ. ಸೂರ್ಯ ಪ್ರತಾಪ್ ಸಿಂಗ್ಗೆ ಕೃಷಿ ಖಾತೆ ದೊರೆತಿದ್ದರೆ, ಸ್ವತಂತ್ರದೇವ್ ಸಿಂಗ್ಗೆ ಜಲಶಕ್ತಿ ಸಚಿವಾಲಯದ ಜವಾಬ್ದಾರಿ ದೊರೆತಿದೆ.
ಬೇಬಿ ರಾಣಿ ಮೌರ್ಯ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನೀಡಲಾಗಿದೆ. ಧರ್ಮಪಾಲ್ ಸಿಂಗ್ಗೆ ಡೇರಿ ಅಭಿವೃದ್ಧಿ, ಜೈವೀರ್ ಸಿಂಗ್ಗೆ ಪ್ರವಾಸೋದ್ಯಮ ಖಾತೆ ಹಂಚಿಕೆ ಮಾಡಲಾಗಿದೆ.
ಜಿತಿನ್ ಪ್ರಸಾದ ಅವರಿಗೆ ಲೋಕೋಪಯೋಗಿ ಖಾತೆ ನೀಡಲಾಗಿದ್ದು, ನಂದ ಗೋಪಾಲ್ ಅವರಿಗೆ ಕೈಗಾರಿಕಾಭಿವೃದ್ಧಿ ಖಾತೆ ನೀಡಲಾಗಿದೆ.
ಇನ್ನಿತರ ಖಾತೆಗಳು
ಸಂಜಯ್ ನಿಶಾದ್ – ಮೀನುಗಾರಿಕೆ
ಅಶೀಷ್ ಪಟೇಲ್ – ತಾಂತ್ರಿಕ ಶಿಕ್ಷಣ
ನಿತಿನ್ ಅಗರ್ವಾಲ್ – ಅಬಕಾರಿ
ಅಸೀಮ ಅರುಣ್ – ಸಮಾಜ ಕಲ್ಯಾಣ
ದಯಾ ಶಂಕರ್ ಸಿಂಗ್ – ಸಾರಿಗೆ
ಡ್ಯಾನಿಷ್ ಆಜಾದ್ – ಅಲ್ಪಸಂಖ್ಯಾತ ಕಲ್ಯಾಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.