ADVERTISEMENT

ಸಾಂಸ್ಕೃತಿಕ ರಾಷ್ಟ್ರೀಯತೆ ಉಗಮ ದೊಡ್ಡ ಸಾಧನೆ: ಯೋಗಿ ಆದಿತ್ಯನಾಥ್‌ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 12:41 IST
Last Updated 19 ಮಾರ್ಚ್ 2021, 12:41 IST
ಯೋಗಿ ಆದಿತ್ಯನಾಥ್‌
ಯೋಗಿ ಆದಿತ್ಯನಾಥ್‌   

ಲಖನೌ: ಅಪರಾಧಗಳ ನಿಯಂತ್ರಣದ ಜೊತೆಗೆ ರಾಜ್ಯದಲ್ಲಿ ‘ಸಾಂಸ್ಕೃತಿಕ ರಾಷ್ಟ್ರೀಯತೆ’ಯ ಉಗಮಕ್ಕೆ ನಾಂದಿ ಹಾಡಿದ್ದು ತನ್ನ ಆಡಳಿತ ಅವಧಿಯ ಬಹುದೊಡ್ಡ ಸಾಧನೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ತಮ್ಮ ನೇತೃತ್ವದ ಸರ್ಕಾರ ನಾಲ್ಕು ವರ್ಷ ಆಡಳಿತ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಅವರುವರದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಹೂಡಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿ ಮತ್ತು ಗೋವಂಶ ರಕ್ಷಕರಿಗೆ (ಹಸು ಸಾಕುವವರಿಗೆ) ಪ್ರೋತ್ಸಾಹ ನೀಡಿದ್ದೂ ಸಾಧನೆಯೇ. ಅಲ್ಲದೆ, ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯವು ಯಾವುದೇ ಕೋಮು ಗಲಭೆಗೆ ಸಾಕ್ಷಿಯಾಗಲು ಬಿಡಲಿಲ್ಲ. ದೇಶದ ಅತಿದೊಡ್ಡ ಆರ್ಥಿಕತೆಗಳಲ್ಲಿ ರಾಜ್ಯ ಒಂದೆನಿಸುವಂತೆ ಮಾಡಲಾಗಿದೆ ಎಂದು ಅವರು ಬಣ್ಣಿಸಿಕೊಂಡಿದ್ದಾರೆ.

ADVERTISEMENT

ನಮ್ಮ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಅಪರಾಧ ಪ್ರಮಾಣವು ಇಳಿಮುಖವಾಗಿದೆ. ದರೋಡೆ, ಕೊಲೆ ಮತ್ತು ಅತ್ಯಾಚಾರದ ಘಟನೆಗಳು ಕಡಿಮೆಯಾಗಿವೆ ಎಂದು ಯೋಗಿ ಹೇಳಿದ್ದಾರೆ.

ರಾಜ್ಯದ ಜನತೆಯನ್ನು ಕುರಿತು ಬರೆದಿರುವ ಪತ್ರವನ್ನು ಬಿಡುಗಡೆ ಮಾಡಿದ ಯೋಗಿ, ‘ತಮ್ಮ ಆಡಳಿತದ ಅವಧಿಯಲ್ಲಿ ‘ಸಾಂಸ್ಕೃತಿಕ ರಾಷ್ಟ್ರೀಯತೆ’ಯ ಜ್ಯೋತಿಯು ಎಲ್ಲರ ಹೃದಯದಲ್ಲಿ ಬೆಳಗಿತು. ಜನತೆ ‘ಸನಾತನ ಧರ್ಮ’(ಹಿಂದೂ ಧರ್ಮ)ವನ್ನು ಅನುಸರಿಸಿದರು. ಸಾಂಸ್ಕೃತಿಕ ರಾಷ್ಟ್ರೀಯತೆಯ ಜ್ಯೋತಿಯು ಸನಾತನ ಧರ್ಮವನ್ನು ನಂಬಿರುವ ಎಲ್ಲರ ಹೃದಯವನ್ನು ಸಂತೋಷಪಡಿಸಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು, ಗಂಗಾ ಯಾತ್ರೆ ಹಾಗೂ ಸಾಂಸ್ಕೃತಿಕ ರಾಷ್ಟ್ರೀಯತೆಯ ಭಾಗವಾಗಿ ಧಾರ್ಮಿಕ ಪಟ್ಟಣಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದನ್ನು ಯೋಗಿ ಇದೇ ಸಂದರ್ಭ ಉಲ್ಲೇಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.