ADVERTISEMENT

ಉತ್ತರ ಪ್ರದೇಶ: ರಾಜನಾಥ್ ಪ್ರಚಾರಕ್ಕೆ ಅಡ್ಡಿ

ಸರ್ಕಾರದ ವಿರುದ್ಧ, ಅಖಿಲೇಶ್ ಪರ ಘೋಷಣೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 17:33 IST
Last Updated 22 ಫೆಬ್ರುವರಿ 2022, 17:33 IST
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್   

ಬಲಿಯಾ (ಉತ್ತರ ಪ್ರದೇಶ): ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಲ್ಲಿ ಬಿಜೆಪಿ ಪರವಾಗಿ ನಡೆಸುತ್ತಿದ್ದ ಪ್ರಚಾರ ಸಭೆಯ ವೇಳೆ, ಕೆಲವು ಯುವಕರು ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪರವಾಗಿ ಘೋಷಣೆ ಕೂಗಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಲ್ಲಿನ ಬನ್ಷಿ ಬಜಾರ್‌ನಲ್ಲಿ ರಾಜನಾಥ್ ಅವರು ಭಾಷಣ ಮಾಡುತ್ತಿದ್ದರು. ಆಗ ಕೆಲವು ಯುವಕರು, ಅವರ ಭಾಷಣಕ್ಕೆ ಅಡ್ಡಿಪಡಿಸಿದರು. ‘ಮೂರು ವರ್ಷಗಳಿಂದ ಸೇನೆಯ ನೇಮಕಾತಿ ನಡೆದಿಲ್ಲ. ಸರ್ಕಾರ ನೇಮಕಾತಿ ನಡೆಸುತ್ತಿಲ್ಲ’ ಎಂದು ಘೋಷಣೆ ಕೂಗಿದರು.

ಆಗ ಅವರನ್ನು ರಾಜನಾಥ್ ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಯುವಕರು ಘೋಷಣೆ ಕೂಗುವುದನ್ನು ಮುಂದುವರಿಸಿದರು. ಅದರ ಮಧ್ಯೆಯೇ ರಾಜನಾಥ್ ಸಹ ಭಾಷಣ ಮುಂದುವರಿಸಿದರು.

ADVERTISEMENT

ರಾಜನಾಥ್ ಅವರ ಭಾಷಣ ಇನ್ನೇನುಮುಗಿಯುತ್ತಿದೆ ಎನ್ನುವಾಗ ಒಬ್ಬ ಯುವಕ ಎಂದು ನಿಂತು, ‘ಬಡವರ ಆಪತ್ಬಾಂಧವ ಅಖಿಲೇಶ್ ಯಾದವ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ.ಆ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

* ಸೇನೆಯ ನೇಮಕಾತಿಯಂತಹ ವಿಚಾರಗಳಲ್ಲಿ ರಾಜಕೀಯವನ್ನು ತರಬಾರದು. ಇದರಲ್ಲಿ ರಾಜಕೀಯವನ್ನು ತಂದರೆ ಪರಿಸ್ಥಿತಿ ಬಿಗಡಾಯಿಸುತ್ತದೆ.

-ರಾಜನಾಥ್ ಸಿಂಗ್, ರಕ್ಷಣಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.