ಮುಂಬೈ: ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸುವ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿರ್ಧಾರದ ವಿರುದ್ಧ ಸಚಿವ ಆದಿತ್ಯ ಠಾಕ್ರೆ ಅವರ ನಿರ್ದೇಶನದ ಮೇರೆಗೆ ಶಿವಸೇನೆಯ ಯುವ ವಿಭಾಗ ಯುವಸೇನಾ ಶನಿವಾರ ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.
'ಭಾರತದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆಈ ವಾರ ಹತ್ತು ಲಕ್ಷ ದಾಟಿದೆ.ಸಾಂಕ್ರಾಮಿಕ ರೋಗದಿಂದಾಗಿ ಅತಿ ಹೆಚ್ಚು ಹಾನಿಗೊಳಗಾದ ವಿಶ್ವದ ಮೂರನೇ ದೇಶ ಭಾರತ' ಎಂದು ಅವರು ಸಂಘಟನೆ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.
'ಈ ಸಂಕಷ್ಟ ಸಮಯದಲ್ಲಿಯೇ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್ಆರ್ಡಿ) ಮತ್ತು ಯುಜಿಸಿ ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವವಿದ್ಯಾನಿಲಯಗಳ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಘೋಷಿಸಿವೆ. ಪರೀಕ್ಷೆಯ ಮಾರ್ಗಸೂಚಿಗಳನ್ನೇನ್ನೋಪ್ರಕಟಿಸಲಾಗಿದೆ. ಆದರೆ ದೇಶದಾದ್ಯಂತ ಇರುವ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ, ಆತಂಕ ಮತ್ತು ಸುರಕ್ಷತೆಯನ್ನು ಕಡೆಗಣಿಸಲಾಗಿದೆ' ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯುವಸೇನಾ, ಯುಜಿಸಿ ಮತ್ತು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕ್ರಮವಾಗಿ ಮೇ 9 ಮತ್ತು ಜುಲೈ 7ರಂದು ಪತ್ರಗಳನ್ನು ಬರೆದು, ಅಂತಿಮ ವರ್ಷದ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಅಧಿಕಾರಿಗಳನ್ನು ಕೋರಿದೆ. ಬದಲಾಗಿ, ವಿದ್ಯಾರ್ಥಿಗಳ ಸರಾಸರಿ ಅಂಕಗಳ ಆಧಾರದ ಮೇಲೆ ಉತ್ತೀರ್ಣಗೊಳಿಸುವಂತೆ ಸೂಚಿಸಿದೆ.
ಪತ್ರಿಕೆ ಪರಿಶೀಲನೆ, ಪರೀಕ್ಷಾ ಫಲಿತಾಂಶಗಳನ್ನು ಘೋಷಿಸುವ ದಿನಾಂಕ ಮತ್ತು ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶ ಮತ್ತು ಅದರಲ್ಲಿ ವಿಳಂಬ ಮುಂತಾದ ಸವಾಲುಗಳನ್ನು ಯುಜಿಸಿ ಎದುರಿಸಬಹುದು. ಪರೀಕ್ಷೆಗಳನ್ನು ಆನ್ಲೈನ್ನಲ್ಲಿ ನಡೆಸಿದರೆ ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಬಹುದು ಎಂದು ಹೇಳಿದೆ.
ಐಐಟಿಗಳಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳು ಮತ್ತು ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ, ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಇತರ ಸರ್ಕಾರಗಳು ಈಗಾಗಲೇ ಪರೀಕ್ಷೆಗಳನ್ನು ರದ್ದುಗೊಳಿಸಿವೆ ಎಂದು ಯುವಸೇನಾ ಗಮನಸೆಳೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.