ADVERTISEMENT

ಅಧಿಕಾರ ಬಂದ 24 ಗಂಟೆಯಲ್ಲಿ ರೈತರ ₹53,000 ಕೋಟಿ ಸಾಲ ಮನ್ನಾ: ಜೆಡಿಎಸ್‌ ಪ್ರಣಾಳಿಕೆ

ನಿರುದ್ಯೋಗ ನಿವಾರಣೆಗೆ ಅರಣ್ಯ ಬೆಳೆಸುವ ಸೂತ್ರ

​ಪ್ರಜಾವಾಣಿ ವಾರ್ತೆ
Published 7 ಮೇ 2018, 7:02 IST
Last Updated 7 ಮೇ 2018, 7:02 IST
ಅಧಿಕಾರ ಬಂದ 24 ಗಂಟೆಯಲ್ಲಿ ರೈತರ ₹53,000 ಕೋಟಿ ಸಾಲ ಮನ್ನಾ: ಜೆಡಿಎಸ್‌ ಪ್ರಣಾಳಿಕೆ
ಅಧಿಕಾರ ಬಂದ 24 ಗಂಟೆಯಲ್ಲಿ ರೈತರ ₹53,000 ಕೋಟಿ ಸಾಲ ಮನ್ನಾ: ಜೆಡಿಎಸ್‌ ಪ್ರಣಾಳಿಕೆ   

ಬೆಂಗಳೂರು: ‘ಸರ್ಕಾರಿ ಜಮೀನುಗಳಲ್ಲಿ ಅರಣ್ಯ ಬೆಳೆಸುವ ಜವಾಬ್ದಾರಿ ನೀಡಿ ನಿರುದ್ಯೋಗ ನಿವಾರಣೆ, ರೈತರು ಮಾಡಿರುವ ₹53 ಸಾವಿರ ಕೋಟಿ ಸಾಲ 24 ಗಂಟೆಗಳಲ್ಲಿ ಮನ್ನಾ, ಸಣ್ಣ ಟ್ರಾಕ್ಟರ್‌ ಖರೀದಿಗೆ ಶೇ 75 ಸಬ್ಸಿಡಿ,...’ –ಇವು ಜೆಡಿಎಸ್‌ ಸೋಮವಾರ ಬಿಡುಗಡೆ ಮಾಡಿರುವ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿರುವ ಕೆಲವು ಪ್ರಮುಖ ಭರವಸೆಗಳು.

ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ ಶೀರ್ಷಿಕೆಯನ್ನು ಹೊತ್ತಿರುವ ಪ್ರಣಾಳಿಕೆಯನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು.

ರಾಜ್ಯದ ರೈತರು ಸಹಕಾರಿ ಸಂಘಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ₹53 ಸಾವಿರ ಕೋಟಿ ಸಾಲವನ್ನು 24 ಗಂಟೆಗಳಲ್ಲಿ ಮನ್ನಾ ಮಾಡುವುದು, ಸಣ್ಣ ಟ್ರಾಕ್ಟರ್‌ ಖರೀದಿಗೆ ಶೇ 75 ಹಾಗೂ ಇತರೆ ಸಲಕರಣೆಗಳ ಖರೀದಿಗೆ ಶೇ 90ರಷ್ಟು ಸಬ್ಸಿಡಿ ನೀಡುವುದು, ರೈತರು ನೀರು ಸಂಗ್ರಹ ಮಾಡುವ ಯಾವುದೇ ವ್ಯವಸ್ಥೆಗೆ ಶೇ 100 ಸಬ್ಸಿಡಿ, ಸ್ವಸಹಾಯಕ ಸಂಘಗಳಲ್ಲಿ ಮಹಿಳೆಯರು ಮಾಡಿರುವ ಸಾಲ ಮನ್ನಾ, ಆಶಾ ಕಾರ್ಯಕರ್ತರ ಪ್ರೋತ್ಸಾಹಕ ಧನ ₹3500 ರಿಂದ ₹5000ಕ್ಕೆ ಏರಿಕೆ ಮಾಡಲಾಗುತ್ತದೆ,..ಹೀಗೆ ಅನೇಕ ಭರವಸೆಗಳ ಮೂಲಕ ರೈತರು ಹಾಗೂ ಮಹಿಳೆಯರನ್ನು ಸೆಳೆಯುವ ಪ್ರಯತ್ನ ಮಾಡಿರುವುದು ಕಾಣುತ್ತಿದೆ.

ADVERTISEMENT

ದುಡಿಯುವ ಮಹಿಳೆಗೆ ಬೆಂಗಳೂರಿನಲ್ಲಿ ವಸತಿ

ವಕೀಲ ಸಂಘಕ್ಕೆ ₹100 ಕೋಟಿ ಅನುದಾನ, ಗ್ರಾಮ ವಾಸ್ತವ್ಯ ಮುಂದುವರಿಕೆ, ದುಡಿಯುವ ಮಹಿಳೆಯರಿಗಾಗಿ ಬೆಂಗಳೂರಿನಲ್ಲಿ 100 ವಸತಿ ನಿಲಯ ಸ್ಥಾಪನೆ, ಡಾ.ವಿಷ್ಣುವರ್ಧನ್‌ ಸಮಾಧಿ ವಿಚಾರದಲ್ಲಿನ ವಿವಾದ ಬಗೆಹರಿಸುವುದು, ಬಡ ಮಹಿಳೆಯರಿಗೆ ತಿಂಗಳಿಗೆ ₹2000 ಕುಟುಂಬ ನಿರ್ವಹಣಾ ಭತ್ಯೆ ನೀಡಲಾಗುತ್ತದೆ ಎಂದಿದೆ.

65 ವರ್ಷ ಮೇಲ್ಪಟ್ಟವರಿಗೆ ₹6000 ಪಿಂಚಣಿ

65 ವರ್ಷ ವರ್ಷ ಮೇಲ್ಪಟ್ಟ ರಾಜ್ಯದ ಎಲ್ಲ ಹಿರಿಯ ನಾಗರಿಕರಿಗೆ ತಿಂಗಳಿಗೆ ₹6000 ಪಿಂಚಣಿ ನೀಡಲಾಗುತ್ತದೆ. ₹5 ಕೋಟಿಗೂ ಹೆಚ್ಚಿನ ಸರ್ಕಾರದ ಯೋಜನೆಗಳು ಸಾರ್ವಜನಿಕರ ಅವಗಾಹನೆಗೆ ಒಳಪಟ್ಟಿರುತ್ತವೆ, ‘ಸೇವಾ ಹಕ್ಕು ಕಾಯ್ದೆ ಜಾರಿ’, ವಕೀಲರಿಗೆ ತಿಂಗಳಿಗೆ ₹5000 ಸ್ಟೈಫಂಡ್‌, ಜಿಲ್ಲಾ ನೋಂದಣಿ ಕೇಂದ್ರ ಜಾರಿ, ದ್ವಿದಳ ಧಾನ್ಯಗಳಿಗೆ ₹500 ಬೆಂಬಲ ಬೆಲೆ, ಸರ್ಕಾರಿ ಶಾಲೆ ಮೇಲ್ದರ್ಜೆಗೆ ಏರಿಸುವುದಾಗಿ ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗಿದೆ.

* ಈ ಬಾರಿ ನನಗೆ ಅವಕಾಶ ನೀಡಿ. ವಿಶ್ವವೇ ಕರ್ನಾಟಕದ ಕಡೆ ತಿರುಗಿ ನೋಡುವ ಆಡಳಿತ ನೀಡುತ್ತೇನೆ.

-ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

ಇತರೆ ಮುಖ್ಯಾಂಶಗಳು:

* ಬಯಲು ಸೀಮೆಗೆ 60 ಟಿಎಂಸಿ ನೀರು

* ನೀರಾವರಿ ಕ್ಷೇತ್ರದಲ್ಲಿ ₹1.5 ಲಕ್ಷ ಕೋಟಿ ಹೂಡಿಕೆ

* ರಾಮನಗರದ ಫಿಲ್ಮ್ ಸಿಟಿಯಲ್ಲಿ 1 ಲಕ್ಷ ಜನರಿಗೆ ಉದ್ಯೋಗ

* ಗ್ರಾಮೀಣ ಪ್ರದೇಶದ ಯುವಕರಿಗೆ ₹7000 ದಿಂದ ₹8000 ವೇತನ ನೀಡಿ, ಅವರ ಮೂಲಕ ಸಾಮಾಜಿಕ ಅರಣ್ಯ ಬೆಳೆಸಲು ಕ್ರಮ.

*ಲೋಕಾಯುಕ್ತ ಬಲ ವರ್ಧನೆ, ಎಸಿಬಿ ರದ್ದು.

* ಇಸ್ರೇಲ್ ಮಾದರಿ ಕ್ರಷಿಗೆ ಪ್ರೋತ್ಸಾಹ.

* ಸರ್ಕಾರಿ ಶಾಲೆಗೆ ಪ್ರೋತ್ಸಾಹ, ಡೊನೇಷನ್ ಹಾವಳಿಗೆ ಕೊನೆ.

* ಬಿಬಿಎಂಪಿ ವ್ಯಾಪ್ತಿಯಲ್ಲಿ 350 ಹಾಸಿಗೆಗಳ ಸಾಮರ್ಥ್ಯದ 4 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ.

* ಅಂಗಾಂಗಕಸಿ ಮಾಡಿಸಿಕೊಳ್ಳುವ ರೋಗಿಗಳಿಗೆ ಸರ್ಕಾರದಿಂದಲೇ ವೆಚ್ಚ ಭರಿಸಲು ಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.