ಚಿತ್ರದುರ್ಗ: ಅನೈತಿಕ ಸಂಬಂಧ ಪ್ರಕರಣವೊಂದರಲ್ಲಿ ಪ್ರೇಯಸಿಯ ಕೊಲೆಗೈದ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ವಿದ್ಯಾನಗರದ ಬಳಿಯ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ಯಾತ್ರಿನಿವಾಸದಲ್ಲಿ ಭಾನುವಾರ ನಡೆದಿದೆ.
ಹಿರಿಯೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿಯ ಕುಮಾರಸ್ವಾಮಿ (32) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ತನ್ನ ಪ್ರೇಯಸಿ, ನಗರದ ಜೋಗಿಮಟ್ಟಿ ರಸ್ತೆಯ ವಾಸಿ ಲಲಿತಮ್ಮ (26) ಅವರ ಕತ್ತು ಕೊಯ್ದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಲಲಿತಮ್ಮ ಮತ್ತು ಕುಮಾರಸ್ವಾಮಿ ಮೂಲತಃ ಮಲ್ಲಪ್ಪನಹಳ್ಳಿ ಗ್ರಾಮದವರು. ಲಲಿತಮ್ಮಗೆ 10 ವರ್ಷದ ಹಿಂದೆ ಮದುವೆಯಾಗಿದ್ದು, ಒಂದು ಗಂಡು ಮತ್ತು ಹೆಣ್ಣು ಮಗುವಿದೆ. ಲಲಿತಮ್ಮ ಜತೆ ಅನೈತಿಕ ಸಂಬಂಧ ಹೊಂದಿದ್ದ ಕುಮಾರಸ್ವಾಮಿ, ಶಿವಮೊಗ್ಗದ ರಾಜಶೇಖರ್ ಎಂದು ಹೆಸರು ಬರೆಯಿಸಿ ಶನಿವಾರ ರಾತ್ರಿ ಯಾತ್ರಿ ನಿವಾಸದಲ್ಲಿ ಕೊಠಡಿಯನ್ನು ಪಡೆದುಕೊಂಡಿದ್ದರು. ಆದರೆ, ಭಾನುವಾರ ಬೆಳಿಗ್ಗೆ ಬಾಗಿಲು ತೆರೆಯದೆ ಇದ್ದಾಗ ಮಾಲೀಕರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.