ಬೆಂಗಳೂರು: ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಪುತ್ರ ಜಯ್ ಷಾ ಹೆಸರಿನಲ್ಲಿ ಆದಾಯ ಸ್ಪೀಡ್ ಟ್ರೈನ್ ರೀತಿಯಲ್ಲಿ ಏರಿಕೆ ಆಗಿದ್ದು ಹೇಗೆ’ ಎಂದು ಎಐಸಿಸಿ ಸಂವಹನ ವಿಭಾಗದ ಅಧ್ಯಕ್ಷ ಸರ್ಜೆವಾಲ ಅವರು ಪ್ರಶ್ನಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಅಧ್ಯಕ್ಷ ಡಾ.ಜಿ ಪರಮೇಶ್ವರ್, ದಿನೇಶ್ ಗುಂಡೂರಾವ್ ಹಾಗೂ ಆರ್.ಎಸ್. ಸರ್ಜೆವಾಲ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕರ್ನಾಟಕ, ಗುಜರಾತ್ ಇಲ್ಲವೆ ದೇಶದ ಯಾವುದೆ ರಾಜ್ಯದ ಕೈಗಾರಿಕೋದ್ಯಮಿ ಆದಾಯ ಈ ರೀತಿ ಏರಿಕೆ ಆಗಿಲ್ಲ ಎಂದು ಸರ್ಜೆವಾಲ ಅವರು ಹೇಳಿದರು.
ಅಮಿತ್ ಶಾ ಅವರ ಪುತ್ರನ ಆದಾಯ ಏರಿಕೆ ಪ್ರಕರಣದ ಬಗ್ಗೆ ಐಟಿ ಅಧಿಕಾರಿಗಳು ಪ್ರಶ್ನೆ ಮಾಡುತ್ತಿಲ್ಲ ಎಂದರು.
ಆರ್ಎಸ್ಎಸ್ ಅಮಿತ್ ಷಾ ಅವರ ಮಗನ ಆದಾಯ ಏರಿಕೆ ಪ್ರಕರಣದ ಬಗ್ಗೆ ತನಿಖೆಗೆ ಒತ್ತಾಯ ಮಾಡುತ್ತಾ? ಅಡ್ವಾಣಿ ಅವರ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಿದ್ದರು. ನಿತಿನ್ ಗಡ್ಕರಿ ಸಹ ಅಧ್ಯಕ್ಷ ಸ್ಥಾನದಲ್ಲಿ ಇದ್ದಾಗ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಿದ್ದರು. ಅಮಿತ್ ಷಾ ಅವರು ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಡಲಿ. ಬಿಜೆಪಿ ಮುಖಂಡರು ಸಹ ಅವರ ರಾಜೀನಾಮೆಗೆ ಒತ್ತಾಯ ಮಾಡಬೇಕು ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.