ಕಾರವಾರ: ‘ನೀನು ಮುಂದೊಂದು ದಿನ ಹೆಸರು ಗಳಿಸುತ್ತೀಯಾ’ ಇದು ವರಾಹಪುರ (ಹಳದೀಪುರ)ದ ನೃತದೃಷ್ಟೆ ಅರುಣಾ ರಾಮಚಂದ್ರ ಶಾನಭಾಗಳಿಗೆ ಜ್ಯೋತಿಷಿಯೊಬ್ಬರು ಹೇಳಿದ್ದ ಭವಿಷ್ಯ.ಇದನ್ನು ಕೇಳಿ ಮಗಳು ಹೆಸರು ಗಳಿಸುತ್ತಾಳೆ ಎಂದು ಪಾಲಕರು ಖುಷಿ ಪಟ್ಟಿದ್ದರು.
ಆದರೆ, ವಿಧಿಲಿಖಿತ ಬೇರೆಯೇ ಆಯಿತು. ಮುಂಬೈನ ಕಿಂಗ್ ಎಡ್ವರ್ಡ್ ಆಸ್ಪತ್ರೆಯ ವಾರ್ಡ್ಬಾಯ್ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಅರುಣಾ ಶಾನಭಾಗ್ ಕಳೆದ 37 ವರ್ಷಗಳಿಂದ ಅದೇ ಆಸ್ಪತ್ರೆಯ ಬೆಡ್ ಒಂದರಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಪ್ರಜ್ಞಾಶೂನ್ಯ ಸ್ಥಿತಿಯಲ್ಲಿರುವ ಈಕೆಗೆ ದಯಾಮರಣ ನೀಡಬೇಕೆ ಬೇಡವೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಲಿದೆ.
ಅರುಣಾ ಶಾನಭಾಗಳ ಮೂಲ ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹಳದೀಪುರ. ರಾಷ್ಟ್ರೀಯ ಹೆದ್ದಾರಿ-17ರಲ್ಲಿರುವ ಇದನ್ನು ವರಾಹಪುರ ಎಂದು ಕರೆಯಲಾಗುತ್ತಿತ್ತು. ಮುಸ್ಲಿಮರ ಆಳ್ವಿಕೆಯ ಸಂದರ್ಭದಲ್ಲಿ ಹಂದಿಪುರ ಆಗಿ ನಂತರ ದಿನಗಳಲ್ಲಿ ಹಳದೀಪುರ ಎಂದಾಗಿದೆ.ಇಲ್ಲಿರುವ ಗೋಪಿನಾಥ ವೆಂಕಟ್ರಮಣ ಮಠದ ಹತ್ತಿರವಿರುವ ‘ಗರವೇ ನಿವಾಸ-1963’ ಅರುಣಾಳ ಸ್ವಂತ ಮನೆ. ರಾಮಚಂದ್ರ ಶ್ಯಾನಭಾಗರ ಮಕ್ಕಳು ಯಾರೂ ಇಲ್ಲಿ ನೆಲೆಸಿಲ್ಲ. ಆದರೆ ಗರವೇ ಮನೆತನಕ್ಕೆ ಸೇರಿದ ಲಕ್ಷ್ಮಣ ಸುಬ್ರಾಯ ಶಾನಭಾಗರ ಕುಟುಂಬ ಮಾತ್ರ ಇಲ್ಲಿ ವಾಸವಾಗಿದೆ.
ರಾಮಚಂದ್ರ ಶಾನಭಾಗರಿಗೆ ಆರು ಪುತ್ರರು ಹಾಗೂ ಮೂವರು ಪುತ್ರಿಯರು. ಕೊನೆಯವಳು ಅರುಣಾ. ಆರು ಪುತ್ರರ ಪೈಕಿ ಹಿರಿಯರಾದ ಬಾಲಕೃಷ್ಣ, ಗೋವಿಂದ ಹಾಗೂ ಸದಾನಂದ ಅವರು ವ್ಯಾಸರಾಯ ಶಾನಭಾಗರಿಗೆ ಸೇರಿದ ಮುಂಬೈನ ಅಗ್ರಿಪಾಳ ಚಾಳದಲ್ಲಿರುವ ನಂ.25 ‘ಹಿಂದು ವಿಶ್ರಾಂತಿ ಗೃಹ’ದಲ್ಲಿ ಕೆಲಸ ಮಾಡುತ್ತಿದ್ದರು.ವರಾಹಪುರದ ಅಗ್ರಹಾರದಲ್ಲಿರುವ ರೂರಲ್ ಎಜ್ಯುಕೇಶನ್ ಸೊಸೈಟಿಯ ಶಾಲೆಯಲ್ಲಿ ಹತ್ತನೇ ತರಗತಿ ವರೆಗೆ ಓದಿದ ಅರುಣಾ, ತಂದೆ-ತಾಯಿ ಕಾಲವಾದ ನಂತರ ಮುಂಬೈನಲ್ಲಿ ಅಣ್ಣ ಬಾಲಕೃಷ್ಣ ಶಾನಭಾಗರ ಹತ್ತಿರ ಹೋಗಿ ನೆಲೆಸಿದ್ದಳು. ಅಲ್ಲಿಯೇ ನರ್ಸ್ ಕೋರ್ಸ್ ಪೂರೈಸಿ ಕೆಇಎಂ ಆಸ್ಪತ್ರೆಗೆ ಕೆಲಸಕ್ಕೆ ಸೇರಿಕೊಂಡಳು.
ಸೌಂದರ್ಯದ ಖನಿಯಾಗಿದ್ದ ಅರುಣಾಳ ಪಾಲಿಗೆ 1974ನೇ ಇಸವಿಯ ದಿನವೊಂದು ಕರಾಳ ದಿನವಾಗಿ ಪರಿಣಮಿಸಿತು. ಆಸ್ಪತ್ರೆಯಲ್ಲಿ ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗಬೇಕು ಎಂದು ಬಟ್ಟೆ ಬದಲಾಯಿಸುತ್ತಿರುವಾಗ ವಾರ್ಡ್ಬಾಯ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ.
ಅಂದಿನಿಂದ ಆಕೆ ಯಾರ ಪಾಲಿಗೂ ಇಲ್ಲವಾಗಿದ್ದಾಳೆ. ಅರುಣಾಳ ಸೌಂದರ್ಯವೇ ಆಕೆಯ ಜೀವಕ್ಕೆ ಮುಳುವಾಯಿತು. ಹಳದೀಪುರದಲ್ಲಿ ಆಕೆಯ ಬಗ್ಗೆ ಗೊತ್ತಿದ್ದವರೆಲ್ಲ ಅವಳು ಸರಳ ಸ್ವಭಾವದ, ಸೌಂದರ್ಯ ಹೊಂದಿದ ಹುಡುಗಿ ಎನ್ನುತ್ತಾರೆ. ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಅರುಣಾ ಅರೆ ಪ್ರಜ್ಞಾವಸ್ಥೆಯಲ್ಲಿ ಇರುವುದು ಹಳದೀಪುರದ ಬಹುತೇಕ ಯುವ ಪೀಳಿಗೆಗೆ ಗೊತ್ತಿಲ್ಲ.
ಕೆಲವರು ಪತ್ರಿಕೆಗಳಲ್ಲಿ ಬಂದಿರುವ ಸುದ್ದಿಯನ್ನು ನೋಡಿ ಅರುಣಾಳ ಚಿಂತಾಜನಕ ಸ್ಥಿತಿಯ ಬಗ್ಗೆ ತಿಳಿದುಕೊಂಡಿದ್ದು ‘ಒಬ್ಬರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಯಾವುದೇ ಕಾರಣಕ್ಕೂ ಆಕೆಗೆ ದಯಾಮರಣ ದಯಪಾಲಿಸಬಾರದು’ ಎಂದು ಪ್ರಾರ್ಥಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.