ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್ ಆಯೋಜಿಸಿದ್ದ `ಮುಸ್ಲಿಂ ಸಮಾವೇಶ~ದಲ್ಲಿ ಪಾಲ್ಗೊಂಡಿದ್ದ ಸೊರಬ ತಾಲ್ಲೂಕಿನ ಮುಸ್ಲಿಂ ಮುಖಂಡರು, ಸಮಾವೇಶದ ನಂತರ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದರು.
`ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಮ್ಮ ತಂದೆ (ಎಸ್. ಬಂಗಾರಪ್ಪ) ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಮುಸ್ಲಿಮರ ರಕ್ಷಣೆ ಕುರಿತೂ ಅವರು ಕಾಳಜಿ ವಹಿಸಿದ್ದರು. ಅವರ ಹಾದಿಯಲ್ಲೇ ನಾನು ಕೂಡ ಈ ಸಮುದಾಯದ ಅಭಿವೃದ್ಧಿ ಹಾಗೂ ರಕ್ಷಣೆಗೆ ಬದ್ಧನಾಗಿರುತ್ತೇನೆ~ ಎಂದು ಭರವಸೆ ನೀಡಿದರು.
ಸೊರಬ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಶ್ರಿಪಾದ ರಾವ್ ಮಾತನಾಡಿ, `ಬಂಗಾರಪ್ಪ ಅವರ ಆಶಯದಂತೆ ಮಧು ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಚುನಾಯಿಸಬೇಕು~ ಎಂದು ಕೋರಿದರು.
ಬಿಜೆಪಿಯ ಜಾವಿದ್ ಕಾನಕೇರಿ, ಕಾಂಗ್ರೆಸ್ನ ದಸ್ತಗೀರ್ ತಟ್ಟಿಕೆರೆ ಮತ್ತಿತರರು ಈ ಸಂದರ್ಭದಲ್ಲಿ ಜೆಡಿಎಸ್ ಸೇರಿದರು. ಸೊರಬ ಕ್ಷೇತ್ರದ ಜೆಡಿಎಸ್ ಮುಖಂಡರಾದ ಇಕ್ಬಾಲ್ ಆನವಟ್ಟಿ, ಕಲಂದರ್ ಆನವಟ್ಟಿ, ಜೆಡಿಎಸ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್, ಮಾಜಿ ಅಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಚಾಮರಾಜ್, ಪಕ್ಷದ ರಾಜ್ಯ ಎಸ್.ಟಿ. ಘಟಕದ ಅಧ್ಯಕ್ಷ ಅನಂತಯ್ಯ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.