ಬೆಂಗಳೂರು, (ಪಿಟಿಐ): ~ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ, ಆದರೆ, ಅವು ಮೇಲ್ನೋಟಕ್ಕೆ ಸಾಬೀತಾಗಿಲ್ಲ~ ಎಂದು ಬಿಜೆಪಿಯ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
~ಯಡಿಯೂರಪ್ಪ ಅವರನ್ನು ಅಧಿಕಾರ ಬಿಟ್ಟುಕೊಡಿ ಎಂದು ಕೇಳಬೇಕಾದ ಅಗತ್ಯವೂ ಈಗಿಲ್ಲ, ಭ್ರಷ್ಟಾಚಾರದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ತಕ್ಷಣವೇ ಅವರೇ ತಮ್ಮ ಸ್ಥಾನವನ್ನು ಬಿಟ್ಟುಕೊಡುವರು~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
~ಇಬ್ಬರು ವಕೀಲರು, ಮುಖ್ಯಮಂತ್ರಿಗಳು ಭ್ರಷ್ಟಾಚಾರ ಮಾಡಿದ್ದಾರೆ~ ಎಂದು ನೀಡಿದ ದೂರನ್ನು ಆಧರಿಸಿ ಯಡಿಯೂರಪ್ಪ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ನೀಡಿದ ರಾಜ್ಯಪಾಲರ ಕ್ರಮಕ್ಕೆ ಅವರು ಆಕ್ಷೇಪಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಡೆಸಿದರೆನ್ನಲಾದ ಭ್ರಷ್ಟಾಚಾರ ಕುರಿತು ಈಗಾಗಲೇ ನ್ಯಾಯಾಂಗ ಆಯೋಗ ತನಿಖೆ ನಡೆಸುತ್ತಿದೆ, ಜೊತೆಗೆ ಲೋಕಾಯುಕ್ತರೂ ತನಿಖೆ ನಡೆಸುತ್ತಿದ್ದಾರೆ. ಈ ಎರಡೂ ತನಿಖೆಗಳ ಫಲಿತಾಂಶ ಹೊರಬರುವವರೆಗೂ ಕಾಯಬೇಕು ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
~ಯಡಿಯೂರಪ್ಪ ಅವರ ಮೇಲಿನ ಆರೋಪಗಳ ಬಗ್ಗೆ ಪಕ್ಷವು ಆಂತರಿಕವಾಗಿ ತನಿಖೆ ನಡೆಸುತ್ತಿದೆ~ ಎಂದು ಈಚೆಗೆ ಬಿಜೆಪಿಯ ವಕ್ತಾರ ಪ್ರಕಾಶ್ ಜಾವಡೇಕರ್ ಅವರು ಹೇಳಿದ್ದರು. ಆದರೆ ಆ ಹೇಳಿಕೆಗೆ ವ್ಯತಿರಿಕ್ತವಾಗಿ, ~ಆಂತರಿಕ ತನಿಖೆ ನಡೆಯತ್ತಿಲ್ಲ~ ಎಂದು ರಾಜನಾಥ್ ಸಿಂಗ್ ಅವರು ಗುರುವಾರ ಇಲ್ಲಿ ತಿಳಿಸಿದ್ದಾರೆ.ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ ಅವರ ಮೇಲೆ ಕ್ರಮ ಜರುಗಿಸುವ ಕುರಿತಂತೆ ಬಿಜೆಪಿಯ ನಾಯಕರಲ್ಲಿ ಯಾವುದೆ ಬಗೆಯ ಭೀನ್ನಾಭಿಪ್ರಾಯಗಳಿಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.