ADVERTISEMENT

ಆಸ್ಪತ್ರೆಗೆ ಬೀಗ- ಆವರಣದಲ್ಲೇ ಹೆರಿಗೆ...

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST
ಆಸ್ಪತ್ರೆಗೆ ಬೀಗ- ಆವರಣದಲ್ಲೇ ಹೆರಿಗೆ...
ಆಸ್ಪತ್ರೆಗೆ ಬೀಗ- ಆವರಣದಲ್ಲೇ ಹೆರಿಗೆ...   

ತುಮಕೂರು: ಅಲ್ಲಿ ನಿಂತಿದ್ದ ನೂರಾರು ಜನರು ಕ್ಷಣಕಾಲ ನಾಚಿ ತಲೆ ತಗ್ಗಿಸಿದ್ದರು. ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದರೂ ಹೆರಿಗೆ ನೋವಿನಲ್ಲಿ ನರಳುತ್ತಿದ್ದ ಗರ್ಭಿಣಿಗೆ ವೈದ್ಯಕೀಯ ಸೇವೆ ದೊರಕಿಸಿ ಕೊಡಲಾಗುತ್ತಿಲ್ಲವಲ್ಲ ಎಂದು ಮೌನವಾದರು.

ಹೆರಿಗೆ ನೋವು ತಾಳಲಾದರೆ ಗರ್ಭಿಣಿ ಕಿರುಚಾಟ ಕೇಳಿದ ಮಹಿಳೆಯರು ಮನೆಗೆ ಓಡಿಹೋಗಿ ಕೈಗೆ ಸಿಕ್ಕ ಬೆಡ್‌ಶೀಟ್, ಸೀರೆಗಳನ್ನು ತಂದು ಮರೆಮಾಡಿ  ಹೆರಿಗೆ ಮಾಡಿಸಿ ನಿಟ್ಟುಸಿರು ಬಿಟ್ಟರು.

ಆಸ್ಪತ್ರೆ ಆವರಣದಲ್ಲಿ ಮಗುವಿಗೆ ಜನ್ಮ ನೀಡಿದವರು ಆಸ್ಪತ್ರೆಗೆ ಸಮೀಪದ ಸೋಮಸಾಗರದ ಶಾರದಮ್ಮ. ಅವರನ್ನು ಮಧ್ಯಾಹ್ನವೇ ಆಸ್ಪತ್ರೆಗೆ ಕರೆತಂದರೂ ವೈದ್ಯರು ಇಲ್ಲದೆ ಆಸ್ಪತ್ರೆಗೆ ಬೀಗ ಜಡಿಯಲಾಗಿತ್ತು. ವೈದ್ಯರು ಬರುತ್ತಾರೆ ಎಂದು ನಂಬಿ ಆವರಣದಲ್ಲೇ ನೋವು ತಿನ್ನುತ್ತಾ ಮಲಗಿದ್ದರು. ನೋವು ತಾಳಲಾರದೆ ಕಿರುಚಾಟ ಜಾಸ್ತಿಯಾದಾಗ ಗಮನಿಸಿದ ಗ್ರಾಮಸ್ಥರು ತಾವೇ ಹೆರಿಗೆ ಮಾಡಿಸುವಲ್ಲಿ ಸಫಲರಾದರು. ವಿಪರೀತ ರಕ್ತಸ್ರಾವ ಆಗಿದ್ದ ಬಾಣಂತಿಯನ್ನು ಸಂಜೆ ವೇಳೆಗೆ 108 ಅಂಬುಲೆನ್ಸ್ ಮೂಲಕ ತುಮಕೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು.

`ಗ್ರಾಮಾಂತರ ಕ್ಷೇತ್ರದ ಶಾಸಕರು ಸರ್ಕಾರದಲ್ಲಿ ಪ್ರಬಾವಿ ಎಂದು ಹೇಳಿಕೊಳ್ಳುತ್ತಾರೆ. ವೈದ್ಯೆ ಜತೆ ಜಗಳ ಮಾಡಿದ್ದು, ರಜೆ ಮೇಲೆ ತೆರಳಿದ್ದರು. ವೈದ್ಯೆಯನ್ನು  ಮನವೊಲಿಸಿ ಕರೆತಂದಿದ್ದೆವು. ಆದರೆ ಸಣ್ಣ ಘಟನೆಯೊಂದರಲ್ಲಿ ವೈದ್ಯರನ್ನು ಅಮಾನತು ಮಾಡಲಾಯಿತು. ಎರಡು ತಿಂಗಳಿಂದ ನಿಯೋಜನೆ ಮೇಲೆ ವೈದ್ಯರು ಇದ್ದರೂ ಇಲ್ಲದಂತಾಗಿದೆ~ ಎಂದು ಮಂಜುನಾಥ್ ಎನ್ನುವವರು `ಪ್ರಜಾವಾಣಿ~ಗೆ ದೂರವಾಣಿ ಮೂಲಕ ದೂರಿದರು.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಮಾಜಿ ಶಾಸಕ ಎಚ್.ನಿಂಗಪ್ಪ ಜನರನ್ನು ಸಮಾಧಾನಗೊಳಿಸಿ ಶಾರದಮ್ಮ ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.