ಗುಲ್ಬರ್ಗ: ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ (ಸಿಯುಕೆ) ನವೆಂಬರ್ 9ರ ವರೆಗೆ ದಿಢೀರ್ ರಜೆ ಘೋಷಿಸಿರುವುದರಿಂದ ಉತ್ತರ ಭಾರತದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಕಾಶ್ಮೀರ, ಹರಿಯಾಣ, ಅರುಣಾಚಲ ಪ್ರದೇಶ, ಮಣಿಪುರ, ಸಿಕ್ಕಿಂ, ನಾಗಾಲ್ಯಾಂಡ್, ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ವಿದ್ಯಾರ್ಥಿಗಳು ‘ದಿಢೀರ್ ರಜೆ’ಯಿಂದಾಗಿ ದಿಕ್ಕು ತೋಚದಂತಾಗಿದ್ದಾರೆ.
‘ವೈರಾಣು ಸೋಂಕಿನಿಂದ ಬಿ.ಟೆಕ್ ವಿದ್ಯಾರ್ಥಿ ಮೊಹ್ಮದ್ ಚಾಂದ್ ಆಲಂ ಎಂಬಾತ ಮೃತಪಟ್ಟ ಹಿನ್ನೆಲೆಯಲ್ಲಿ ಏಕಾಏಕಿ 10 ದಿನ ರಜೆ ಘೋಷಿಸಿದ್ದಾರೆ. ನಮ್ಮ ಊರುಗಳಿಗೆ ಹೋಗಲು ಕನಿಷ್ಠ ಮೂರು ದಿನ, ವಾಪಸು ಬರಲು ಮೂರು ದಿನ ಬೇಕು. ಅಲ್ಲದೇ, ಕಾಯ್ದಿರಿಸಿದ ರೈಲ್ವೆ ಟಿಕೆಟ್ಗಳೂ ಲಭ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ ಊರಿಗೆ ಹೋಗುವುದಾದರೂ ಹೇಗೆ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಾರೆ.
‘ಹಾಸ್ಟೆಲ್ನಲ್ಲಿ ಕುಡಿಯುವ ನೀರಿನ ಅಭಾವವಿದೆ. ಇರುವ ನೀರಿನಲ್ಲಿ ವೈರಾಣುಗಳಿವೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಒಬ್ಬ ವಿದ್ಯಾರ್ಥಿ ಈಗಾಗಲೇ ಮೃತಪಟ್ಟಿದ್ದು, ಇಬ್ಬರು ಗುಲ್ಬರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಹಾಸ್ಟೆಲ್ನಲ್ಲೂ ಇರುವ ಹಾಗಿಲ್ಲ, ಊರಿಗೆ ಹೋಗಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕೇರಳ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ವಿದ್ಯಾರ್ಥಿಗಳು ಊರಿಗೆ ಹೋಗುತ್ತಿದ್ದಾರೆ. ಆದರೆ, ನಾವೇನು ಮಾಡಬೇಕು ಎನ್ನುವುದೇ ತೋಚುತ್ತಿಲ್ಲ’ ಎಂದು ಬಿಹಾರದ ವಿದ್ಯಾರ್ಥಿಗಳು ಆತಂಕದಿಂದಲೇ ಹೇಳಿದರು.
ಪ್ರತ್ಯೇಕ ಚರ್ಚೆ ಸೃಷ್ಟಿಸಿದ ಗೊಂದಲ: ಮೃತ ವಿದ್ಯಾರ್ಥಿ ಗೌರವಾರ್ಥ ಶ್ರದ್ಧಾಂಜಲಿ ಸಭೆ ನಡೆಸಲು ವಿದ್ಯಾರ್ಥಿಗಳು ಹಾಗೂ ವಿ.ವಿ ಆಡಳಿತ ಮಂಡಳಿಯವರು ಮುಂದಾಗಿದ್ದರು. ಆದರೆ, ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿ ಶಾರದಾ ಕೂಡ ಅಸ್ವಸ್ಥರಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಹಣ ಸಂಗ್ರಹಿಸುವ ಸಲುವಾಗಿ ಕೇರಳ ಮತ್ತು ಆಂಧ್ರದ ವಿದ್ಯಾರ್ಥಿಗಳು ಒಂದೆಡೆ ಸೇರಿ ಚರ್ಚಿಸುತ್ತಿದ್ದರು. ಆಗ ಅಲ್ಲಿಗೆ ಬಂದ ಪ್ರಭಾರ ಕುಲಸಚಿವೆ ಪ್ರೊ.ಶಿವಗಂಗಾ ರುಮ್ಮಾ ಅವರು, ‘ಪ್ರತ್ಯೇಕವಾಗಿ ಏನು ಚರ್ಚೆ ನಡೆಸುತ್ತಿದ್ದೀರಿ’ ಎಂದು ಪ್ರಶ್ನಿಸಿದಾಗ ‘ನಮಗೆ ಕನ್ನಡ ಬರುವುದಿಲ್ಲ. ಇಂಗ್ಲಿಷ್ನಲ್ಲಿ ಮಾತನಾಡಿ’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರುಮ್ಮಾ, ‘ನಾನು ಕನ್ನಡ ಪ್ರಾಧ್ಯಾಪಕಿ, ನನಗೆ ಇಂಗ್ಲಿಷ್ ಚೆನ್ನಾಗಿ ಬರುವುದಿಲ್ಲ’ ಎಂದಿದ್ದಾರೆ. ಆಗ ಅಲ್ಲಿದ್ದ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ನಕ್ಕು ಅವಮಾನಿಸಿದರು ಎಂದು ಸ್ಥಳೀಯ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯ ವಿದ್ಯಾರ್ಥಿಗಳಿಂದ ಬೆದರಿಕೆ?
‘ಪ್ರಭಾರ ಕುಲಸಚಿವೆ ಪ್ರೊ.ಶಿವಗಂಗಾ ರುಮ್ಮಾ ಅವರನ್ನು ಅವಮಾನಿಸಲಾಗಿದೆ ಎಂದು ದೂರಿ ಸ್ಥಳೀಯ ವಿದ್ಯಾರ್ಥಿಗಳು ನಮಗೆ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ಕೇರಳ, ಆಂಧ್ರಪ್ರದೇಶದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.