ಕಾರವಾರ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಕ್ಷೀಣಿಸಿದ್ದ ಮಳೆ, ಭಾನುವಾರ ಬೆಳಿಗ್ಗೆ ಜೋರಾಗಿ ಸುರಿಯಿತು.
ಮುಂಗಾರು ಅವಧಿ ಆರಂಭವಾದಾಗಿನಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದ ರೈತರು ಖುಷಿಯಾಗಿದ್ದು, ಹೊಲಗಳ ಉಳುಮೆ ಮಾಡಿ ನಾಟಿ ಕಾರ್ಯ ಆರಂಭಿಸಿದ್ದಾರೆ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರ ತಾಲ್ಲೂಕುಗಳ ವಿವಿಧೆಡೆ, ಮಲೆನಾಡು ಪ್ರದೇಶದ ಯಲ್ಲಾಪುರ, ಶಿರಸಿ, ಸಿದ್ದಾಪುರ, ಜೊಯಿಡಾ ಭಾಗದಲ್ಲಿ ರೈತರು ಬಿಡುವಿಲ್ಲದ ಕೆಲಸದಲ್ಲಿ ನಿರತರಾಗಿದ್ದಾರೆ. ಮುಂಡಗೋಡ, ಹಳಿಯಾಳ ತಾಲ್ಲೂಕುಗಳಲ್ಲಿ ಮೆಕ್ಕೆಜೋಳ ಬೆಳೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ, ಜೊಯಿಡಾ ತಾಲ್ಲೂಕಿನಲ್ಲಿ ಕಾಳಿ ನದಿಗೆ ಕಟ್ಟಿರುವ ಸೂಪಾ ಅಣೆಕಟ್ಟೆಗೆ ಒಳಹರಿವು ಹೆಚ್ಚಿದೆ. ಶನಿವಾರದ ಮಾಹಿತಿ ಪ್ರಕಾರ 809 ಕ್ಯುಸೆಕ್ ಗಳಷ್ಟಿತ್ತು.
ಭಾನುವಾರ ಬೆಳಿಗ್ಗೆಯಿಂದಲೇ ಮಳೆ ಬಿದ್ದ ಕಾರಣ ಕಾರವಾರದ ಎಂ.ಜಿ.ರಸ್ತೆ ಹಾಗೂ ಸುತ್ತಮುತ್ತ ನಡೆಯುವ ವಾರದ ಸಂತೆಗೆ ತೊಂದರೆಯಾಯಿತು. ಜಿಲ್ಲೆಯ ಗೋಕರ್ಣ, ಅಂಕೋಲಾ, ದೂರದ ಊರುಗಳಾದ ಧಾರವಾಡ, ಬೆಳಗಾವಿ, ಹಾವೇರಿ ಭಾಗದಿಂದ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ತೆರೆಯಲಾಗದೇ ಪರದಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.