ADVERTISEMENT

ಎತ್ತಿನಹೊಳೆ: ಪರಿಷತ್‌ನಲ್ಲಿ ಧರಣಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2014, 19:30 IST
Last Updated 18 ಫೆಬ್ರುವರಿ 2014, 19:30 IST
ವಿಧಾನ ಪರಿಷತ್ತಿನಲ್ಲಿ ನಿದ್ದೆಗೆ ಜಾರಿದ ಕಾಂಗ್ರೆಸ್‌ ಸದಸ್ಯ ಶ್ರೀಕಾಂತ್‌ ಘೋಟ್ನೇಕರ್‌ –ಪ್ರಜಾವಾಣಿ ಚಿತ್ರ
ವಿಧಾನ ಪರಿಷತ್ತಿನಲ್ಲಿ ನಿದ್ದೆಗೆ ಜಾರಿದ ಕಾಂಗ್ರೆಸ್‌ ಸದಸ್ಯ ಶ್ರೀಕಾಂತ್‌ ಘೋಟ್ನೇಕರ್‌ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಎತ್ತಿನಹೊಳೆ ಯೋಜನೆ ಅನುಷ್ಠಾನ­ಗೊಳಿಸು­ವಲ್ಲಿ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸದಸ್ಯ ಡಿ.ಎಸ್‌. ವೀರಯ್ಯ ಮಂಗಳವಾರ ವಿಧಾನ­ಪರಿಷತ್‌ನಲ್ಲಿ ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದ ಪ್ರಸಂಗ ನಡೆಯಿತು.

ನಿಯಮ 330ರ ಮೇರೆಗೆ ಈ ವಿಷಯ ಪ್ರಸ್ತಾಪಿಸಿದ ಅವರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮ­ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ವಿಷಯದಲ್ಲಿ ರಾಜಕೀ­ಯವೂ ನಡೆಯುತ್ತಿದೆ. ಆದರೆ, ಇದು ರಾಜಕೀಯದ ಪ್ರಶ್ನೆ ಅಲ್ಲ. ಜನರ ಜೀವನ್ಮರಣದ ಪ್ರಶ್ನೆಯಾಗಿದೆ. ಕುಡಿಯುವ ನೀರಿ­ಗಾಗಿ ಪರದಾಡುತ್ತಿರುವ ಜನರ ಶಾಪ ಸರ್ಕಾರಕ್ಕೆ ತಟ್ಟು­ತ್ತದೆ. ಸರ್ಕಾರ ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯ­ವಹಿಸದೆ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನ­ಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಇದೇ ವಿಷಯದ ಬಗ್ಗೆ ಮಾತನಾಡಿದ ಜೆಡಿಎಸ್‌ ನಾಯಕ ಎಂ.ಸಿ.­ ನಾಣಯ್ಯ, ನದಿ ನೀರನ್ನು ತಿರುಗಿಸುವ ಈ ಯೋಜನೆಗೆ ಸಾಕಷ್ಟು ವಿರೋಧವೂ ಇದೆ. ಆದ್ದರಿಂದ, ಜನರಲ್ಲಿ ಮೂಡಿ­ರುವ ಗೊಂದಲ, ಆತಂಕಗಳನ್ನು ದೂರ ಮಾಡುವ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಎಲ್ಲ ಪಕ್ಷಗಳ ನಾಯಕರ ಸಭೆ ನಡೆಸ­ಬೇಕು. ಇದು ರಾಜ್ಯ ಸರ್ಕಾರದ ಯೋಜನೆ­ಯಾಗಿರು­ವುದರಿಂದ ಈ ಯೋಜನೆಗೆ ಕೇಂದ್ರ ಸರ್ಕಾರ ಶಂಕು ಸ್ಥಾಪನೆ ಮಾಡಬಾರದು ಎಂದರು.

ಬಿಜೆಪಿ ಸದಸ್ಯೆ ಪ್ರೊ.ಎಸ್‌.ಆರ್‌. ಲೀಲಾ ಮಾತನಾಡಿ, ಜಿಲ್ಲೆ­ಗ­ಳ ಮಧ್ಯೆ ದ್ವೇಷ ಬೆಳೆಸುವ ವಾತಾವರಣ ಕಲ್ಪಿಸುವುದು ಬೇಡ. ಯೋಜನೆ ಬಗ್ಗೆ ತಂತ್ರಜ್ಞರು ಮತ್ತು ರಾಜಕಾರಣಿಗಳ ಜತೆ ಪೂರ್ವಭಾವಿ ಸಭೆ ನಡೆಸಿ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳ­ಬೇಕು ಎಂದರು.
ನಂತರ ಜಲಸಂಪನ್ಮೂಲ ಸಚಿವ ಎಂ.ಬಿ . ಪಾಟೀಲ್‌ ಅವರಉತ್ತರದಿಂದ ಸಮಾಧಾನಗೊಳ್ಳದ ವೀರಯ್ಯ, ಸಭಾಪತಿ ಪೀಠದ ಮುಂದೆ ಕೆಲಕಾಲ ಧರಣಿ ನಡೆಸಿದರು.

‘ಒಂದು ವಾರದಲ್ಲಿ ಕಾರ್ಯಾದೇಶ’
ಎತ್ತಿನಹೊಳೆ ಯೋಜನೆಯ ಅನುಷ್ಠಾನದ ಎಲ್ಲ ಪ್ರಕ್ರಿಯೆ­ಗಳು ಪೂರ್ಣಗೊಂಡಿದ್ದು, ಕಾಮಗಾರಿಗೆ ಒಂದು ವಾರದಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ಈಗಾಗಲೇ ₨ 12,912 ಕೋಟಿ ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿ ತಯಾರಿಸಲಾಗಿದೆ. ಇದು ಕೇವಲ ಕುಡಿಯುವ ನೀರಿನ ಯೋಜನೆ­ಯಾಗಿ­ರುವುದರಿಂದ ಪರಿಸರ ಇಲಾಖೆಯ ಅನುಮೋದನೆ ದೊರೆತಿದೆ. ಆದರೂ, ಜನರಲ್ಲಿ ಮೂಡಿರುವ ಆತಂಕ­ಗಳನ್ನು ದೂರ ಮಾಡಲು ಶೀಘ್ರ ಜನಪ್ರತಿನಿಧಿಗಳ ಸಭೆ ಕರೆದು ಪರಿಹಾರ ರೂಪಿಸಲಾಗುವುದು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.