ADVERTISEMENT

ಏಕರೂಪದ ಪರಿಸರ ಕಾಯ್ದೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST
ಏಕರೂಪದ ಪರಿಸರ ಕಾಯ್ದೆ ಅಗತ್ಯ
ಏಕರೂಪದ ಪರಿಸರ ಕಾಯ್ದೆ ಅಗತ್ಯ   

ಸಾಗರ (ಶಿವಮೊಗ್ಗ ಜಿಲ್ಲೆ): ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಲ್ಲಿರುವ ಕಾಯ್ದೆಗಳಲ್ಲಿ ಏಕರೂಪತೆ ಇರುವುದು ಅತ್ಯಗತ್ಯ ಎಂದು ಕಾನೂನು ಮತ್ತು ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ ಕುಮಾರ್ ಶನಿವಾರ ಇಲ್ಲಿ ಹೇಳಿದರು.

 ವೃಕ್ಷಲಕ್ಷ ಆಂದೋಲನ, ಸೇವಾ ಸಾಗರ ಟ್ರಸ್ಟ್, ಪಶ್ಚಿಮಘಟ್ಟ ಕಾರ್ಯ ಪಡೆ ಮತ್ತು ಅರಣ್ಯ ಇಲಾಖೆ ಏರ್ಪಡಿಸಿದ್ದ ‘ಮಲೆನಾಡಿನ ಸುಸ್ಥಿರ ಅಭಿವೃದ್ಧಿಯ ಸಾಧ್ಯತೆಗಳು’ ಕುರಿತ ವಿಚಾರಗೋಷ್ಠಿ ಮತ್ತು ಪಶ್ಚಿಮ ಘಟ್ಟದ ಸ್ವಯಂ ಸೇವಾ ಸಂಸ್ಥೆಗಳ ಸಮ್ಮೇಳನಉದ್ಘಾಟಿಸಿ ಮಾತನಾಡಿದರು.

 ಪರಿಸರ ಕಾನೂನುಗಳ ಏಕರೂಪತೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳ ಸರ್ಕಾರದೊಂದಿಗೆ ಹಾಗೂ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಅದನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

ADVERTISEMENT

ಅಭಿವೃದ್ಧಿ ಹಾಗೂ ಪರಿಸರ ಇವೆರಡರ ನಡುವೆ ಸಮನ್ವಯತೆ ಇರಬೇಕು. ಯೋಜನೆಗಳನ್ನು ರೂಪಿಸುವಾಗ ಪರಿಸರವನ್ನು ಸಂರಕ್ಷಿಸುವ ದೃಷ್ಟಿಕೋನ ಇಲ್ಲದಿದ್ದರೆ ಪರಿಸರ ಉಳಿಯಲು ಸಾಧ್ಯವಿಲ್ಲ ಎಂದರು. ಯಾವುದೇ ವಿಷಯದ ಸಂರಕ್ಷಣೆ ವಿಚಾರ ಬಂದರೆ ಜನರ ಸಹಭಾಗಿತ್ವ ಮತ್ತು ಪಾಲ್ಗೊಳ್ಳುವಿಕೆ ಇಲ್ಲದಿದ್ದರೆ ಯಾವ ಕಾರ್ಯವೂ ಯಶಸ್ವಿಯಾಗುವುದಿಲ್ಲ. ಪರಿಸರ ಬಗ್ಗೆ ಕಾಳಜಿ ಉಳಿದಿರುವುದು ಸಣ್ಣ ಪಟ್ಟಣ ಮತ್ತು ಹಳ್ಳಿಗಳಲ್ಲಿ ಮಾತ್ರ. ನಗರವಾಸಿಗಳಿಗೆ ಅಭಿವೃದ್ಧಿಯೇ ಮುಖ್ಯವಾಗಿರುವುದರಿಂದ ಪರಿಸರವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.

ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಪರಿಸರ ಮಾಲಿನ್ಯಕ್ಕೆ ಕೇವಲ ರಾಜಕಾರಣಿಗಳನ್ನು ದೂಷಿಸಿ ಪ್ರಯೋಜನವಿಲ್ಲ. ಜನರ ಜೀವನಶೈಲಿ ಬದಲಾಗದೆ ಪರಿಸರ ಉಳಿಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಪಶ್ಚಿಮಘಟ್ಟ ಅಭಿವೃದ್ಧಿ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಜೈವಿಕ ಇಂಧನ ಮಂಡಳಿ ಅಧ್ಯಕ್ಷ ವೈ.ಬಿ. ರಾಮಕೃಷ್ಣ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪದ್ಮನಾಭ ಭಟ್, ಮದ್ಯಪಾನ ನಿಯಂತ್ರಣ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ಎಪಿಎಂಸಿ ಅಧ್ಯಕ್ಷ ಸಿ.ಜಿ. ಮಂಜಪ್ಪ, ನಗರಸಭಾಧ್ಯಕ್ಷ ಎಸ್.ವಿ. ಕೃಷ್ಣಮೂರ್ತಿ, ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ, ಸಾಹಿತಿ ಡಾ.ನಾ. ಡಿಸೋಜ, ಉಪಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.