ADVERTISEMENT

ಕರಡಿ ದಾಳಿಗೆ ಹಸುಳೆ ಸಾವು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 19:37 IST
Last Updated 28 ಫೆಬ್ರುವರಿ 2018, 19:37 IST

ಭದ್ರಾವತಿ: ಕರಡಿ ದಾಳಿಗೆ ನಾಲ್ಕು ತಿಂಗಳ ಹಸುಳೆ ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲ್ಲೂಕಿ ಹಡ್ಲಘಟ್ಟ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಮನೆಯ ಅಂಗಳದಲ್ಲಿ ಬೆಳಿಗ್ಗೆ ದಾಳಿ ನಡೆದಿದೆ. ಪೂರ್ವಿ ಮೃತಪಟ್ಟು ಮಗು. ತಾಯಿ ಗೌರಮ್ಮ, ತಂದೆ ಕುಮಾರ್ ಹಾಗೂ ಅಕ್ಕ ಲಾವಣ್ಯ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ: ಗ್ರಾಮದ ಮನೆಯ ಮುಂದೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಕುಟುಂಬದ ಸದಸ್ಯರು ಅಂಗಳದಲ್ಲಿ ಕುಳಿತಿದ್ದ ವೇಳೆ ತಾಯಿ ಗೌರಮ್ಮ ಅವರ ತೊಡೆಯ ಮೇಲಿದ್ದ ಪೂರ್ವಿ ತಲೆಗೆ ಕರಡಿ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ರಕ್ಷಣೆಗೆ ಮುಂದಾದ ಉಳಿದವರ ಮೇಲೂ ದಾಳಿ ನಡೆಸಿದ ಕರಡಿ ಸುತ್ತಲಿನ ಗ್ರಾಮಸ್ಥರು ಸೇರುತ್ತಿದ್ದಂತೆ ಓಡಿ ಹೋಗಿದೆ.

ADVERTISEMENT

ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲೇ ಸಾವನ್ನಪ್ಪಿದ್ದಳು. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮದಲ್ಲಿ ಈಗ್ಗೆ 15 ದಿನಗಳಿಂದ ಕರಡಿ ಹಾವಳಿ ಜಾಸ್ತಿಯಾಗಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಕರಡಿ ಸೆರೆಗೆ ಪ್ರಯತ್ನ:

ಮಗುವಿನ ಸಾವಿಗೆ ಕಾರಣವಾದ ಕರಡಿ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಚಲುವರಾಜ್ ಹೇಳಿದರು.

ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ್ದ ಅವರು, ಕರಡಿಗಳು ಗ್ರಾಮಕ್ಕೆ ಬರುತ್ತಿರುವ ಸಂಬಂಧ ಯಾವುದೇ ದೂರು ಬಂದಿರಲಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.