ADVERTISEMENT

ಕಸಾಪ ಚುನಾವಣೆ: ಅಧಿಸೂಚನೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷರು, ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಏಪ್ರಿಲ್ 29ರಂದು ನಡೆಯಲಿರುವ ಚುನಾವಣೆಯ ಅಧಿಸೂಚನೆ ಗುರುವಾರ ಪ್ರಕಟವಾಗಿದ್ದು, ನೀತಿ ಸಂಹಿತೆ ಜಾರಿಯಾಗಿದೆ.

 ಅಧಿಸೂಚನೆಯನ್ನು ಪರಿಷತ್ತಿನ ಕೇಂದ್ರ ಕಚೇರಿ, ಎಲ್ಲ ತಾಲ್ಲೂಕು ತಹಶೀಲ್ದಾರ್ ಕಚೇರಿ ಹಾಗೂ ಜಿಲ್ಲೆ ಮತ್ತುಗಡಿನಾಡು ಕಸಾಪ ಘಟಕಗಳ ಅಧ್ಯಕ್ಷರ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಲಾಗಿದೆ. ಚುನಾವಣಾ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.

ಮತದಾರರ ಕರಡು ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಪಟ್ಟಿ ಬಗ್ಗೆ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ಅದನ್ನು ಕಸಾಪ ಕೇಂದ್ರ ಚುನಾವಣಾ ಅಧಿಕಾರಿ, ಜಿಲ್ಲಾ ಕೇಂದ್ರದ ತಾಲ್ಲೂಕು ತಹಶೀಲ್ದಾರ್ ಅಥವಾ ತಾಲ್ಲೂಕು ತಹಶೀಲ್ದಾರ್ ಅವರಿಗೆ ಇದೇ 16ರೊಳಗೆ ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ಕಸಾಪ ಚುನಾವಣಾ ವಿಶೇಷಾಧಿಕಾರಿ ಕೆ. ನಾಗರಾಜು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 100ಕ್ಕಿಂತ ಕಡಿಮೆ ಸಂಖ್ಯೆಯಲ್ಲಿರುವ ಗೋವಾ ರಾಜ್ಯದ ಮತದಾರರು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಮತದಾನ ಮಾಡಲಿದ್ದಾರೆ. ಉಳಿದಂತೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಮತದಾರರು ಕಸಾಪ ಅಧ್ಯಕ್ಷರಲ್ಲದೆ ಗಡಿನಾಡು ಘಟಕದ ಅಧ್ಯಕ್ಷರ ಸ್ಥಾನಕ್ಕೂ ಮತದಾನ ಮಾಡುವರು ಎಂದರು.

2008ರಲ್ಲಿ ನಡೆದ ಚುನಾವಣೆಯ ವೇಳೆ 61,958 ಮಂದಿ ಮತದಾರರಿದ್ದರು. ಈ ಬಾರಿ ಕರಡು ಪಟ್ಟಿಯಲ್ಲಿ 1,08,245 ಮತದಾರರಿದ್ದಾರೆ. ಹಿಂದಿನ ಚುನಾವಣೆಯಲ್ಲಿ 162 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಬಾರಿ ಅವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 100ಕ್ಕಿಂತ ಕಡಿಮೆ ಮತದಾರರಿರುವ ತಾಲ್ಲೂಕು ಕೇಂದ್ರಗಳ ಮತಗಟ್ಟೆಯನ್ನು ಪಕ್ಕದ ತಾಲ್ಲೂಕು ಕೇಂದ್ರಕ್ಕೆ ವರ್ಗಾಯಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಕೇಂದ್ರಗಳ ಮತಗಟ್ಟೆಯಲ್ಲಿ 100ಕ್ಕಿಂತ ಕಡಿಮೆ ಮತದಾರರಿದ್ದರೂ ಅವುಗಳನ್ನು ವರ್ಗಾಯಿಸುವುದಿಲ್ಲ. ಹೋಬಳಿ ಮಟ್ಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮತದಾರರು ಇದ್ದಲ್ಲಿ, ಅಲ್ಲಿಯೇ ಮತಗಟ್ಟೆ ಸ್ಥಾಪಿಸಲಾಗುವುದೆಂದರು. ಕಸಾಪ ಕೇಂದ್ರ ಚುನಾವಣಾ ಅಧಿಕಾರಿ ಎಸ್.ಟಿ.ಮೋಹನ ರಾಜು ಇರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.