ದಾವಣಗೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾಂಗ್ರೆಸ್ ಮುಕ್ತ ಕರೆಗೆ ಇಡೀ ದೇಶದ ಜನ ಸ್ಪಂದಿಸುತ್ತಿದ್ದು, ಕರ್ನಾಟಕದ ಜನರೂ ಕೈಜೋಡಿಸಬೇಕು ಎಂದು ಕೇಂದ್ರ ಗಣಿ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ನರೇಂದ್ರಸಿಂಗ್ ತೋಮರ್ ಮನವಿ ಮಾಡಿದರು.
ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಗುರುವಾರ ಹಮ್ಮಿಕೊಂಡಿದ್ದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ವಿಶೇಷ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಂಗ್ರೆಸ್ ಮುಕ್ತ ಅಭಿಯಾನ ಎಂದರೆ ಕೇವಲ ಕಾಂಗ್ರೆಸ್ ಪಕ್ಷದ ನಿರ್ಮೂಲನೆ ಅಲ್ಲ. ಭ್ರಷ್ಟಾಚಾರ, ವಂಶಾಡಳಿತ, ಸ್ವಜನಪಕ್ಷಪಾತಗಳ ನಿರ್ಮೂಲನೆ. ನೀವು ಬುದ್ಧಿವಂತರಿದ್ದೀರಿ. ಧರ್ಮ, ಸಂಸ್ಕೃತಿ, ಗಡಿ, ಭಾಷೆಗಳನ್ನು ಯಾರು ಕಾಪಾಡುತ್ತಾರೆ ಎಂಬುದರ ಅರಿವು ನಿಮಗಿದೆ. ರಾಜ್ಯದಲ್ಲಿ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿ’ ಎಂದು ಹೇಳಿದರು.
ನರೇಂದ್ರ ಮೋದಿ ಚಿಂತನೆಗಳನ್ನು ಇಡೀ ವಿಶ್ವವೇ ಗುಣಗಾನ ಮಾಡುತ್ತಿದೆ. ಆದರೆ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣಗಳನ್ನು ದೇಶದ ಜನ ಲೇವಡಿ ಮಾಡಿ, ವಾಟ್ಸ್ಆ್ಯಪ್ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಹಕವಾಡಿದರು.
ಇಂದು ರಾಹುಲ್ ಗಾಂಧಿ ದೇವಸ್ಥಾನ, ಮಠ, ಮಂದಿರಗಳಿಗೆ ಹೋಗುವುದಕ್ಕೆ ಬಿಜೆಪಿಯೇ ಕಾರಣ. ಪಕ್ಷ ವಿರೋಧಿಗಳಲ್ಲಿಯೂ ಧರ್ಮ, ಸಂಸ್ಕೃತಿಗಳ ಸದ್ಭಾವನೆ ಬೆಳೆಸುತ್ತದೆ. ಇದೇ ಬಿಜೆಪಿಯ ಶಕ್ತಿ ಎಂದು ಬಣ್ಣಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.