ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಧಾರ್ಮಿಕ ಭಾವೈಕ್ಯದ ಕೇಂದ್ರ ಹಣಗೆರೆಕಟ್ಟೆಯಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿದ್ದು, ನಾಲ್ಕು ಶತಮಾನಗಳ ಇತಿಹಾಸ ಹೊಂದಿರುವ ದರ್ಗಾ ಹಾಗೂ ಮಂದಿರಗಳಿಗೆ ಬೀಗ ಹಾಕಲಾಗಿದೆ.
ಹಣಗೆರೆಕಟ್ಟೆಯಲ್ಲಿನ ಒಂದೇ ಕಟ್ಟಡದಲ್ಲಿ ಹಜರತ್ ಸೈಯದ್ ಸಾದತ್ ದರ್ಗಾ ಹಾಗೂ ಭೂತರಾಯ ಚೌಡೇಶ್ವರಿ ದೇವಾಲಯಗಳಿವೆ. ಹಿಂದೂ ಹಾಗೂ ಮುಸ್ಲಿಮರು ಈ ಮಂದಿರ, ದರ್ಗಾಕ್ಕೆ ಒಟ್ಟಿಗೆ ಪೂಜೆ ಸಲ್ಲಿಸುವುದು ಇಲ್ಲಿನ ಸಂಪ್ರದಾಯ.
ಗ್ರಾಮದ ಸುತ್ತಮುತ್ತ ಹಲವು ದಿನಗಳಿಂದ ಕಾಲರಾ ಹರಡಿದ್ದು, ಸೌಹಾರ್ದ ತಾಣದಲ್ಲಿನ ಸ್ವಚ್ಛತೆಯ ಕೊರತೆ ಕಾರಣ ಅದು ಉಲ್ಬಣಗೊಂಡಿತ್ತು. ಕೆಲವು ದಿನಗಳ ಹಿಂದೆ ದರ್ಗಾದ ಮುಜಾವರ್ ಸಯ್ಯದ್ ಇಸಾಕ್ ಅವರ ಪತ್ನಿ ಸಲೀಮಾ, ಪುತ್ರ ಇದಾಯತ್, ಮಗಳು ರೂಬಿ ಅವರಲ್ಲಿ ಕಾಲರಾ ರೋಗ ಲಕ್ಷಣ ಕಾಣಿಸಿಕೊಂಡಿತ್ತು.
ರೋಗ ಹರಡುತ್ತಿರುವ ಕಾರಣ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಇದೇ 8ರಿಂದ 10ರವರೆಗೆ ಬಾಗಿಲು ಮುಚ್ಚುವಂತೆ ಆದೇಶಿಸಿದೆ.
‘ವರ್ಷಕ್ಕೆ ಸರಾಸರಿ ₹ 1 ಕೋಟಿ ಆದಾಯ ಇರುವ ಈ ತಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ದೇವಸ್ಥಾನಕ್ಕೆ ಬರುವ ಭಕ್ತರು ಎಲ್ಲೆಡೆ ಕಸ ಚೆಲ್ಲುತ್ತಾರೆ. ಅದು ಕೊಳೆತು ನಾರುತ್ತಿದ್ದರೂ ಇತ್ತ ಗಮನಹರಿಸುತ್ತಿಲ್ಲ. ಕೆಲವರಿಗೆ ಇದು ಮೋಜಿನ ತಾಣವಾಗಿದೆ. ಹಾಗಾಗಿ, ಸಾಂಕ್ರಾಮಿಕ ರೋಗಗಳು ಸಾಮಾನ್ಯವಾಗಿವೆ’ ಎಂದು ಸ್ಥಳೀಯರಾದ ವಿಜಯ್ ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.