ADVERTISEMENT

ಕುಕ್ಕೆ ದೇವಸ್ಥಾನಕ್ಕೆ ಚಿನ್ನದ ಬಾಗಿಲು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ಸುಬ್ರಹ್ಮಣ್ಯ: ಯು.ಬಿ. ಗುಂಪಿನ ಮಾಲೀಕ ವಿಜಯ ಮಲ್ಯ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ಬಾಗಿಲನ್ನು ಗುರುವಾರ ಸಮರ್ಪಿಸಲಿದ್ದಾರೆ.

 ಏಪ್ರಿಲ್ ತಿಂಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದ ವಿಜಯ ಮಲ್ಯ, ಚಿನ್ನದ ಬಾಗಿಲನ್ನು  ದೇವರಿಗೆ ಅರ್ಪಿಸುವ ಸಂಕಲ್ಪ ಮಾಡಿದ್ದರು. ಅದೇ ರೀತಿ ಸುಮಾರು 80 ಲಕ್ಷ ರೂಪಾಯಿ ಮೌಲ್ಯದ ಎರಡೂವರೆ ಕೆ.ಜಿ ತೂಕದ ಸ್ವರ್ಣದ್ವಾರ ಸಿದ್ಧವಾಗಿದೆ.

ಚಿನ್ನದ ನಾಜೂಕಾದ ಕೆಲಸವನ್ನು ಕಾರ್ಕಳ ತಾಲ್ಲೂಕಿನ ಮಾಳದ ಸುಧಾಕರ ಡೋಂಗ್ರೆ ಮತ್ತು ತಂಡದವರು  ಎರಡು ತಿಂಗಳಿನಿಂದ ಮಾಡಿದ್ದಾರೆ. ಈ ಚಿನ್ನದ ದ್ವಾರವನ್ನು ದೇವಸ್ಥಾನ ಗರ್ಭಗುಡಿಯ ಹೊರಗಿನ ಮಂಟಪದ ಬಾಗಿಲಿಗೆ ಹೊದಿಸಲಾಗುವುದು.

ವಿಜಯ ಮಲ್ಯರು ಮಂಗಳೂರು ವಿಮಾನ ನಿಲ್ದಾಣದಿಂದ ಸುಳ್ಯಕ್ಕೆ ಮಧ್ಯಾಹ್ನ 2.30ಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದು, ಮಹಾತ್ಮ ಗಾಂಧಿ ಮಲ್ನಾಡು ಪ್ರೌಢಶಾಲೆಯ ಕ್ರೀಡಾಂಗಣದ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ. ನಂತರ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ತೆರಳುವರು. ಮಲ್ಯ ಅವರೊಂದಿಗೆ ಪಿಂಕಿ ಲಾಲ್ವಾಣಿ, ನಫೀಸಾ ಮತ್ತು ಮೇಜರ್ ರಾಜೇಶ್ ಮಿತ್ರ ಬರಲಿದ್ದಾರೆ ಎಂದು ತಿಳಿದುಬಂದಿದೆ.

ಮಲ್ಯರಿಂದ ಸ್ವರ್ಣ ದ್ವಾರ ಸಮರ್ಪಣೆ ಕಾರ್ಯಕ್ರಮ ಸಂಜೆ 4 ಗಂಟೆ ವೇಳೆಗೆ  ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.