ADVERTISEMENT

ಕೃಷ್ಣಾ ಮೇಲ್ದಂಡೆ: ನೋಟಿಸ್

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 18:10 IST
Last Updated 8 ಮಾರ್ಚ್ 2011, 18:10 IST

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿರುವ ಆರೋಪ ಹೊತ್ತ ನೀರಾವರಿ ಇಲಾಖೆ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

ಸರ್ಕಾರ, ಇಲಾಖೆ ಇತ್ಯಾದಿಗಳ ವಿರುದ್ಧ ಅಣ್ಣಾರೈ ಪಾಟೀಲ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.

ಅರ್ಜಿಯಲ್ಲಿ ಆರೋಪಿಸಿರುವಂತೆ, ‘ಈ ಯೋಜನೆಯ ನಂತರ ಮುಳುಗಡೆಯ ಭೀತಿಯಿಂದ ನಮ್ಮ ಕೃಷಿ ಜಮೀನನ್ನು ರಕ್ಷಿಸಿಕೊಳ್ಳಲು ಕಾಲುವೆ ನಿರ್ಮಾಣಕ್ಕೆ ಕೋರಿ ಸ್ಥಳೀಯರು ಸರ್ಕಾರಕ್ಕೆ ಮನವಿ ಸಲ್ಲಿಸಿದೆವು. ಆದರೆ ಹಲವು ತಿಂಗಳು ಕಳೆದರೂ ಸರ್ಕಾರಿ ಅಧಿಕಾರಿಗಳು ಅತ್ತ ತಲೆ ಹಾಕಲಿಲ್ಲ. ಇದರಿಂದಾಗಿ ಬೇಸತ್ತು, ಸ್ಥಳೀಯರು ಸೇರಿಕೊಂಡು ಸ್ವಯಂಪ್ರೇರಿತವಾಗಿ ಕಾಲುವೆ ನಿರ್ಮಾಣ ಸೇರಿದಂತೆ ನಮ್ಮ ಜಮೀನು ರಕ್ಷಿಸಲು ಅಗತ್ಯ ಇರುವ ಎಲ್ಲ ಕಾಮಗಾರಿಗಳನ್ನು ಮಾಡಿದೆವು.

ಆದರೆ ಇದರ ಪ್ರಯೋಜನ ಪಡೆದುಕೊಂಡ ನೀರಾವರಿ ಇಲಾಖೆಯ ಅಧಿಕಾರಿಗಳು ತಾವೇ ಕೆಲಸ ಮಾಡಿರುವಂತೆ ಬಿಂಬಿಸಿ, ಲಕ್ಷಾಂತರ ರೂಪಾಯಿಗಳ ಹಣದ ಬಿಲ್ ನೀಡಿ ಸರ್ಕಾರಕ್ಕೆ ವಂಚಿಸಿದ್ದಾರೆ. ನಾವು ಮಾಡಿರುವ ಕೆಲಸ ಅವೈಜ್ಞಾನಿಕವಾಗಿದೆ ಎಂದು ಹೇಳಿ, ಏನೂ ಕೆಲಸವನ್ನು ಮಾಡದೇ ನಾವು ಮಾಡಿರುವ ಕೆಲಸವನ್ನೇ ಉಳಿಸಿಕೊಂಡಿದ್ದಾರೆ. ಆದರೆ ಹಣವನ್ನು ಮಾತ್ರ ‘ಗುಳುಂ’ ಮಾಡಿದ್ದಾರೆ’ ಎಂದಿರುವ ಅರ್ಜಿದಾರರು ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಆದೇಶಿಸುವಂತೆ ಕೋರಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.