ಸೇಡಂ: ತಾಲ್ಲೂಕಿನ ಹುಳಗೋಳ ಗ್ರಾಮದ ಕೆರೆಗೆ ಈಚೆಗೆ ನಿರ್ಮಿಸಿದ ತಡೆಗೋಡೆ ಶುಕ್ರವಾರ ಬೆಳಗಿನ ಜಾವ ಒಡೆದು ಸುಮಾರು 63 ಎಕರೆ ವ್ಯಾಪ್ತಿಯಲ್ಲಿ ಬೆಳೆ ನಾಶಗೊಂಡಿದೆ. ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಗ್ರಾಮದ ಎತ್ತರ ಪ್ರದೇಶದದಿಂದ ನೀರು ಹರಿದು ಈ ಕೆರೆಗೆ ಬರುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಈಚೆಗೆ 360 ಮೀಟರ್ ಸುತ್ತಳತೆಯ ಕೆರೆಗೆ ಒಂದು ಭಾಗದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಸುಮಾರು ಎರಡು ಸಾವಿರ ಹೆಕ್ಟೆರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶ ಇತ್ತು.
ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆಯಂತೆ ಹಳ್ಳಗಳ ಬದಿಗುಂಟ ಇರುವ 63 ಎಕರೆ 24 ಗುಂಟೆ ಜಮೀನಿಗೆ ಕೆರೆ ನೀರು ನುಗ್ಗಿ ತೊಗರಿ, ಸಜ್ಜೆ ಮತ್ತು ಹೆಸರು ಬೆಳೆಗಳು ನಾಶವಾಗಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಿ. ಲಿಂಗಮಾಂತು `ಪ್ರಜಾವಾಣಿ~ ಗೆ ತಿಳಿಸಿದರು.
ಕೆರೆ ನೀರು ಹುಳಗೋಳ, ನಾಮವಾರ ಮತ್ತು ಕಾಚವಾರ ಗ್ರಾಮಗಳವರೆಗೂ ಹರಿದು ಅಕ್ಕಪಕ್ಕದ ಜಮೀನುಗಳ ಬೆಳೆಗಳನ್ನು ಹಾಳು ಮಾಡಿದೆ.
ಬೆಳಿಗ್ಗೆ ಸುದ್ದಿ ತಿಳಿದಾಕ್ಷಣ ಸಹಾಯಕ ಆಯುಕ್ತ ಡಿ.ಕೆ. ರವಿ, ತಹಶೀಲ್ದಾರ ನರಸಿಂಗರಾವ, ನೀರಾವರಿ ಇಲಾಖೆಯ ಎಂಜಿನಿಯರ್ಗಳು, ಅಗ್ನಿ ಶಾಮಕ ದಳ, ಪೊಲೀಸ್ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು, ಶಾಸಕ ಡಾ. ಶರಣಪ್ರಕಾಶ ಪಾಟೀಲ ಉಡಗಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.