ADVERTISEMENT

ಕ್ಯಾನ್ಸರ್: ಅಣು ವಿಕಿರಣ ಕಾರಣವಲ್ಲ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಕಾರವಾರ: ಅಣು ವಿಕಿರಣದಿಂದ ಕ್ಯಾನ್ಸರ್ ಕಾಯಿಲೆ ಹರಡುವ ಪ್ರಮಾಣ ಶೇ 0.1ರಷ್ಟು ಮಾತ್ರ. ಉಳಿದ ಶೇ 99.90ರಷ್ಟು ಜನರಲ್ಲಿ ಬೇರೆಬೇರೆ ಕಾರಣಗಳಿಂದ ಈ ಕಾಯಿಲೆ ಕಂಡು ಬರುತ್ತದೆ ಎಂದು ಮುಂಬೈನ ಟಾಟಾ ಸ್ಮಾರಕ ಕೇಂದ್ರದ ನಿರ್ದೇಶಕ ಡಾ.ರಾಜೇಂದ್ರ ಬಾಡ್ವೆ ತಿಳಿಸಿದರು.

ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ ಆಡಳಿತ ವಿಭಾಗದ ಸಭಾಂಗಣದಲ್ಲಿ ಶನಿವಾರ ನಡೆದ ~ವಿಕಿರಣ ಹಾಗೂ ಕ್ಯಾನ್ಸರ್~ ಕುರಿತ ವಿಚಾರ ಸಂಕಿರಣದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಕ್ಸರೇ, ಸಿ.ಟಿ ಸ್ಕ್ಯಾನ್ ಇತ್ಯಾದಿಗಳು ಅಣುಶಕ್ತಿ ಸ್ಥಾವರಗಳು ಹೊರಸೂಸುವ ವಿಕಿರಣ ಪ್ರಮಾಣಕ್ಕಿಂತ ಹಲವಾರು ಪಟ್ಟು ಹೆಚ್ಚಿನ ವಿಕಿರಣವನ್ನು ಹೊರ ಸೂಸುತ್ತವೆ ಎಂದರು.

ಕೈಗಾ ಅಣು ವಿದ್ಯುತ್ ಸ್ಥಾವರ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಜನರು ಕ್ಯಾನ್ಸರ್‌ನಿಂದ ಸಾಯುತ್ತಿದ್ದಾರೆ ಎನ್ನುವ ದೂರುಗಳು ಬಂದ ಹಿನ್ನೆಲೆಯಲ್ಲಿ ಟಾಟಾ ಸ್ಮಾರಕ  ಕೇಂದ್ರ ಸ್ವತಂತ್ರವಾಗಿ ಈ ಭಾಗದಲ್ಲಿ ಆರೋಗ್ಯ ಸಮೀಕ್ಷೆ ನಡೆಸಲಿದೆ. ಮೂರು ತಿಂಗಳ ಒಳಗೆ ಸಮೀಕ್ಷೆ ಆರಂಭವಾಗಲಿದೆ. ಸ್ಥಾವರ ವ್ಯಾಪ್ತಿಯ  5 ರಿಂದ 16 ಕಿ.ಮೀ ಸುತ್ತಲಿನ ಗ್ರಾಮಗಳಲ್ಲಿ ಹಂತಹಂತವಾಗಿ ಸಮೀಕ್ಷೆ ನಡೆಯಲಿದೆ. ವಿವಿಧ ರೋಗಗಳಿಂದ ಬಳಲುತ್ತಿರುವ ಜನರನ್ನು ಗುರುತಿಸಿ ಆ ರೋಗಗಳಿಗೆ ಕಾರಣಗಳನ್ನು ಕಂಡುಕೊಳ್ಳಲಾಗುವುದು. ರಿಯಾಕ್ಟರ್‌ನಲ್ಲಿ ವಿಕಿರಣದ ಪ್ರಭಾವ ಇರುವ ವಲಯ, ಪ್ರಭಾವ ಇಲ್ಲದ ವಲಯ, ಗ್ರಾಮೀಣ ಭಾಗದ ಮತ್ತು ಸ್ಥಾವರಕ್ಕೆ ಸಮೀಪವಿರುವ ಪಟ್ಟಣದ ಜನರು ಈ ಸಮೀಕ್ಷೆಯ ಭಾಗವಾಗಿದ್ದಾರೆ ಎಂದರು.

ದೇಶದ ನಾನಾ ಭಾಗಗಳಲ್ಲಿರುವ ಅಣು ಸ್ಥಾವರದ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಈ ಕೇಂದ್ರ ಈಗಾಗಲೇ ಸಮೀಕ್ಷೆ ನಡೆಸಿದೆ. ಅಣು ವಿಕಿರಣದಿಂದ ಕ್ಯಾನ್ಸರ್ ಬಂದ ಪ್ರಕರಣಗಳು ಸಮೀಕ್ಷೆಯಲ್ಲಿ ಪತ್ತೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಭಾರತೀಯ ಅಣುಶಕ್ತಿ ನಿಗಮ (ಕಾರ್ಯನಿರ್ವಹಣೆ) ನಿರ್ದೇಶಕ ಜಿ.ನಾಗೇಶ್ವರ ರಾವ್ ಮಾತನಾಡಿ, ದೇಶದಲ್ಲಿರುವ ಎಲ್ಲ ಅಣು ಸ್ಥಾವರಗಳಿಗಿಂತಲೂ ಕೈಗಾ ಸ್ಥಾವರಗಳಲ್ಲಿ ಹೆಚ್ಚು ಸುರಕ್ಷಿತ, ಸಮರ್ಥವಾಗಿ ಕಾರ್ಯ ನಿರ್ವಹಿಸುವ ತಂತ್ರಜ್ಞಾನ ಅಳವಡಿಸಲಾಗಿದೆ ಎಂದರು.ಎನ್‌ಪಿಸಿಐಎಲ್‌ನ ಯೋಜನೆ ಮತ್ತು ಸಂವಹನ ವಿಭಾಗದ ನಿರ್ದೇಶಕ ಎನ್.ನಗೈಚ್ ಮಾತನಾಡಿ, ಕೈಗಾ 5 ಮತ್ತು 6ನೇ ಘಟಕಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.

ಜೈತಾಪುರ್ ಅಣು ಸ್ಥಾವರಕ್ಕೆ ಭೂಮಿ ಪಡೆಯಲಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದಲೂ ಇದಕ್ಕೆ ಅನುಮತಿ ದೊರಕಿದೆ. ಭೂಕಂಪನ ಮತ್ತು ಹವಾಮಾನ ಕುರಿತಾದ ಸಮೀಕ್ಷೆ ನಡೆಯುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.