ADVERTISEMENT

ಗಾಂಧೀಜಿ ಕೊಂದವರ ಮಂದಿರ ಕಟ್ಟುತ್ತಿದ್ದಾರೆ: ಫಾರೂಕ್ ಅಬ್ದುಲ್ಲಾ

‘ಹಿಂದೂಸ್ತಾನ್ ಎಲ್ಲರ ಹಿಂದೂಸ್ತಾನ್’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2017, 10:23 IST
Last Updated 10 ಡಿಸೆಂಬರ್ 2017, 10:23 IST
ಗಾಂಧೀಜಿ ಕೊಂದವರ ಮಂದಿರ ಕಟ್ಟುತ್ತಿದ್ದಾರೆ: ಫಾರೂಕ್ ಅಬ್ದುಲ್ಲಾ
ಗಾಂಧೀಜಿ ಕೊಂದವರ ಮಂದಿರ ಕಟ್ಟುತ್ತಿದ್ದಾರೆ: ಫಾರೂಕ್ ಅಬ್ದುಲ್ಲಾ   

ತುಮಕೂರು: ‘ಮಹಾತ್ಮ ಗಾಂಧೀಜಿ ಕೊಂದವರಿಗೆ ಈಗ ಗುಡಿ ಕಟ್ಟುತ್ತಿದ್ದಾರೆ?  ದೇಶದ ಜನರಿಗೆ ಏನು ಸಂದೇಶ ಹೋಗುತ್ತದೆ ಎಂಬುದು ಗೊತ್ತಿಲ್ಲ’ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದರು.

ತುಮಕೂರಿನಲ್ಲಿ ಭಾನುವಾರ ನೆಡೆದ ಜೆಡಿಎಸ್ ರಾಜ್ಯಮಟ್ಟದ ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಈ ದೇಶದಲ್ಲಿ ಜಾತ್ಯತೀತ ಶಕ್ತಿ, ಗಾಂಧೀಜಿಯ ಬಗ್ಗೆ ಗೊತ್ತಿದೆ. ಇಂತಹ ಪ್ರಯತ್ನಗಳಿಂದ ಏನೂ ಸಾಧನೆ ಮಾಡಿದಂತಾಗುವುದಿಲ್ಲ. ಹಿಂದೂಸ್ತಾನ್ ಎಲ್ಲರ ಹಿಂದೂಸ್ತಾನ್. ಅಲ್ಪಸಂಖ್ಯಾತರೇ ಇರಲಿ, ಯಾರೇ ಇರಲಿ. ಇಲ್ಲಿ ಎಲ್ಲರೂ ಒಂದೇ’ ಎಂದರು.

ADVERTISEMENT

ಮತದ ತಾಕತ್ತು ತಿಳಿಯಿರಿ: ‘ನಿಮ್ಮ ಮತದ ಮಹತ್ವ, ತಾಕತ್ತು ತಿಳಿದುಕೊಳ್ಳಿ. ಮತ ಎಂಬುದು ನಿಮಗೆ ಸುಮ್ಮನೆ ದಕ್ಕಿದ್ದಲ್ಲ. ಸ್ವಾತಂತ್ರ್ಯಕ್ಕೆ ಹೋರಾಟಗಾರರು, ದೇಶದ ಏಕತೆ ಬಯಸಿದವರು ರಕ್ತ ಸುರಿಸಿ ಗಳಿಸಿಕೊಟ್ಟಿರುವಂಥದ್ದು. ನೀವು ಮತ ಹಾಕುವ ಮುನ್ನ ಒಮ್ಮೆ ಇದನ್ನು ನೆನಪಿಸಿಕೊಳ್ಳಿ. ಒಬ್ಬರಿಗೆ ಒಂದೇ ಮತ. ಮುಂದಿನ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಚಲಾಯಿಸಿ’ ಎಂದು ಮನವಿ ಮಾಡಿದರು.

ಮಹಾತಾ ಗಾಂಧೀಜಿ, ಮೌಲಾನಾ ಆಜಾದ್ ಅವರು ಕಂಡ ಜಾತ್ಯತೀತ ರಾಷ್ಟ್ರ ರಕ್ಷಿಸಿ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅಲ್ಪಸಂಖ್ಯಾತರಿಗೆ ಕರೆ ನೀಡಿದರು.

ಮಂದಿರ, ಮಸೀದಿ ಹೆಸರಲ್ಲಿ ರಾಷ್ಟ್ರೀಯ ಪಕ್ಷಗಳು ದೇಶದ ಜನರಲ್ಲಿ ಒಡಕಿನ ಭಾವನೆ ಬಿತ್ತುತ್ತಿವೆ. ಜೆಡಿಎಸ್ ನಂತಹ ಪಕ್ಷಗಳೇ ಜಾತ್ಯತೀತ ಶಕ್ತಿ ಬಲಪಡಿಸಲು ಪ್ರಯತ್ನಿಸುತ್ತಿವೆ.ನಿಮ್ಮ ನಿಲುವು ಜಾತ್ಯತೀತತೆಯ ಪರವಾಗಿಯೇ ಇರಬೇಕು ಎಂದು ಹೇಳಿದರು.

ಜಮ್ಮು, ಕಾಶ್ಮೀರದಲ್ಲಿ ಪ್ರವಾಹ ಆದಾಗ ಮಂದಿರಗಳು ನೆಲಕಚ್ಚಿದ್ದವು. ಮುಸ್ಲಿಮರೇ ಪುನಃ ದೇವಸ್ಥಾನ ಕಟ್ಟಿ ಮೂರ್ತಿ ಸ್ಥಾಪಿಸಿದ ಉದಾಹರಣೆಗಳಿವೆ.ಇದು ನಮ್ಮ ಜಾತ್ಯತೀತತೆಯ ಭಾವನೆಗೆ ಉದಾಹರಣೆ ಎಂದರು.

ಕಾಶ್ಮೀರಿಗಳನ್ಮು ಸಂಶಯದಿಂದ ನೋಡಬೇಡಿ. ಕಾಶ್ಮೀರ ಎಂದರೆ ಪಾಕಿಸ್ತಾನವಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ಬರಲು ರಕ್ತ ಸುರಿಸಿದ್ದಾರೆ.

ಈಗಲೂ ಪಾಕಿಸ್ತಾನ, ಭಾರತದ ನಡುವೆ ಯುದ್ಧವೇನಾದರೂ ಅದರೆ ಮೊದಲು ಹೆಚ್ಚು ಪ್ರಾಣ ಕಳೆದುಕೊಳ್ಳುವವರು ಕಾಶ್ಮೀರಿಗಳೇ. ಇಂತಹ ಆತಂಕದ ಪರಿಸ್ಥಿತಿಯಲ್ಲೂ ಈ ದೇಶದ ಜಾತ್ಯತೀತ ಶಕ್ತಿ ಬಲಪಡಿಸಲು ಶ್ರಮಿಸುತ್ತಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.