ADVERTISEMENT

ಗೌರಿ ಹತ್ಯೆ: ಸನಾತನ ಸಂಸ್ಥೆಯ ನಂಟು ಹೊಂದಿರುವ ಐವರು ಆರೋಪಿಗಳ ಪಾತ್ರದ ಶಂಕೆ

ಏಜೆನ್ಸೀಸ್
Published 7 ಅಕ್ಟೋಬರ್ 2017, 9:56 IST
Last Updated 7 ಅಕ್ಟೋಬರ್ 2017, 9:56 IST
ಗೌರಿ ಹತ್ಯೆ: ಸನಾತನ ಸಂಸ್ಥೆಯ ನಂಟು ಹೊಂದಿರುವ ಐವರು ಆರೋಪಿಗಳ ಪಾತ್ರದ ಶಂಕೆ
ಗೌರಿ ಹತ್ಯೆ: ಸನಾತನ ಸಂಸ್ಥೆಯ ನಂಟು ಹೊಂದಿರುವ ಐವರು ಆರೋಪಿಗಳ ಪಾತ್ರದ ಶಂಕೆ   

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಲ್ಲಿ ಸನಾತನ ಸಂಸ್ಥೆಯ ನಂಟು ಹೊಂದಿರುವ ಐದು ಮಂದಿ ಆರೋಪಿಗಳ ಪಾತ್ರ ಇರುವ ಬಗ್ಗೆ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಐದು ಮಂದಿ ಪೈಕಿ ನಾಲ್ವರ ವಿರುದ್ಧ 2009ರ ಮಡಗಾಂವ್‌ ಸ್ಫೋಟದಲ್ಲಿ ಭಾಗಿಯಾದ ಆರೋಪಗಳಿದ್ದು ಅವರ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಕೂಡಾ ಹೊರಡಿಸಲಾಗಿದೆ.

ಕೊಲ್ಹಾಪುರದ ಪ್ರವೀಣ್‌ ಲಿಮ್ಕರ್‌ (34), ಮಂಗಳೂರಿನ ಜಯಪ್ರಕಾಶ್‌ ಅಲಿಯಾಸ್‌ ಅಣ್ಣ (45), ಪುಣೆಯ ಸಾರಂಗ್‌ ಅಕೋಲ್ಕರ್‌ (38), ಸಾಂಗ್ಲಿಯ ರುದ್ರ ಪಾಟೀಲ್‌ (37) ಮತ್ತು ಸತಾರಾದ ವಿನಯ್‌ ಪವಾರ್‌ (32) ಸದ್ಯ ತಲೆಮರೆಸಿಕೊಂಡಿರುವ ಶಂಕಿತ ಆರೋಪಿಗಳು.

ಗೌರಿ ಹತ್ಯೆ ಪ್ರಕರಣದಲ್ಲಿ ಈ ಐದು ಮಂದಿ ಆರೋಪಿಗಳ ಪಾತ್ರದ ಬಗ್ಗೆಯೂ ವಿಶೇಷ ತನಿಖಾ ತಂಡದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ADVERTISEMENT

ವಿಚಾರವಾದಿಗಳಾಗಿದ್ದ ‌ನರೇಂದ್ರ ದಾಭೋಲ್ಕರ್‌, ಗೋವಿಂದ ಪಾನ್ಸರೆ ಮತ್ತು ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣಗಳಲ್ಲಿಯೂ ರುದ್ರ ಪಾಟೀಲ್‌, ಸಾರಂಗ್‌ ಅಕೋಲ್ಕರ್‌ ಮತ್ತು ವಿನಯ್‌ ಪವಾರ್‌ ಪಾತ್ರ ಇರುವ ಬಗ್ಗೆ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

2009ರ ಅಕ್ಟೋಬರ್‌ 19ರಂದು ನಡೆದ ಮಡಗಾಂವ್‌ ಸ್ಫೋಟ ಪ್ರಕರಣದಲ್ಲಿ ಪ್ರವೀಣ್‌ ಲಿಮ್ಕರ್‌, ಜಯಪ್ರಕಾಶ್‌, ಸಾರಂಗ್‌ ಅಕೋಲ್ಕರ್‌ ಮತ್ತು ರುದ್ರ ಪಾಟೀಲ್‌ ಪ್ರಮುಖ ಆರೋಪಿಗಳಾಗಿದ್ದು ಇವರ ವಿರುದ್ಧ ಇಂಟರ್‌ಪೋಲ್‌ ಮೂಲಕ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲಾಗಿದೆ.

ನರೇಂದ್ರ ದಾಭೋಲ್ಕರ್‌, ಗೋವಿಂದ ಪಾನ್ಸರೆ ಮತ್ತು ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆಗೈದ ರೀತಿಯಲ್ಲೇ ಗೌರಿ ಲಂಕೇಶ್‌ ಹತ್ಯೆಯೂ ನಡೆದಿದೆ. 7.65 ಎಂಎಂ ಪಿಸ್ತೂಲ್‌ನಿಂದಲೇ ಈ ಎಲ್ಲರ ಹತ್ಯೆಯೂ ನಡೆದಿರುವುದು ಒಂದೇ ತಂಡ ಈ ಎಲ್ಲರ ಹತ್ಯೆ ಹಿಂದಿದೆ ಎಂಬ ಅನುಮಾನ ಗಟ್ಟಿಗೊಳ್ಳುವಂತೆ ಮಾಡಿದೆ.

ಇದನ್ನೂ ಓದಿ...
ಗೌರಿ ಲಂಕೇಶ್‌ ಹತ್ಯೆಯಲ್ಲಿ ಸನಾತನ ಸಂಸ್ಥೆ ಪಾತ್ರವಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.