ADVERTISEMENT

ಚಂಚಲಗುಡದಲ್ಲಿ ನರಕಯಾತನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST

ಬೆಂಗಳೂರು: `ಚಂಚಲಗುಡ ಜೈಲಿನಲ್ಲಿರುವಾಗ ನರಕಯಾತನೆ ಅನುಭವಿಸಿದ್ದೇನೆ. ಯಾರೂ ನನ್ನನ್ನು ನೋಡಲು ಬರುತ್ತಿರಲಿಲ್ಲ. ಈಗ ಕರ್ನಾಟಕಕ್ಕೆ ಬಂದಿದ್ದೇನೆ. ಬೆಂಗಳೂರಿನ ಜೈಲಿನಲ್ಲಿ ಹತ್ತು ವರ್ಷ ಇದ್ದರೂ ನೆಮ್ಮದಿಯಿಂದ ಕಾಲ ಕಳೆಯಬಲ್ಲೆ ಅನಿಸುತ್ತಿದೆ~

- ಇದು ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಆರು ತಿಂಗಳಿನಿಂದ ಹೈದರಾಬಾದ್‌ನ ಚಂಚಲಗುಡ ಜೈಲಿನಲ್ಲಿದ್ದು, ಶುಕ್ರವಾರ ಬೆಳಗಿನ ಜಾವ ಬೆಂಗಳೂರಿಗೆ ಬಂದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ, ಹಲಸೂರು ಗೇಟ್ ಠಾಣೆಯ ಪೊಲೀಸ್ ಸಿಬ್ಬಂದಿ ಬಳಿ ಅಳಲು ತೋಡಿಕೊಂಡ ಪರಿ.

ಬೆಳಗಿನ ಜಾವ ನಾಲ್ಕು ಗಂಟೆಗೆ ಠಾಣೆಗೆ ಕರೆತಂದ ಅವರಿಗೆ, ಅಲ್ಲಿನ ಕೊಠಡಿಯೊಂದರಲ್ಲಿ ಮಲಗುವ ವ್ಯವಸ್ಥೆ ಮಾಡಲಾಗಿತ್ತು. ಬಳ್ಳಾರಿಯ ಬೆಂಬಲಿಗರೊಬ್ಬರು ಒದಗಿಸಿದ್ದ ಹಾಸಿಗೆಯನ್ನು ಮಲಗಲು ನೀಡಲಾಗಿತ್ತು. ಬೆಳಿಗ್ಗೆ ಎಂಟು ಗಂಟೆಗೆ ನಿದ್ದೆಯಿಂದ ಎದ್ದ ರೆಡ್ಡಿ, ಸ್ನಾನ ಮುಗಿಸಿದರು. ನಂತರ ಪೊಲೀಸರು ಪೂರೈಸಿದ ಇಡ್ಲಿ, ವಡೆ, ದೋಸೆ ತಿಂದು, ಕಾಫಿಯನ್ನು ಕೇಳಿ ಕುಡಿದರು.

ನಂತರ ಅರ್ಧ ಗಂಟೆಗೂ ಹೆಚ್ಚು ಕಾಲ ಕೆಲ ಪೊಲೀಸ್ ಸಿಬ್ಬಂದಿಯೊಂದಿಗೆ ಮಾತನಾಡಿ, ಆರು ತಿಂಗಳ ಅವಧಿಯ ಜೈಲು ವಾಸ, ಅಲ್ಲಿನ ಪರಿಸ್ಥಿತಿ, ಬೆಂಗಳೂರಿಗೆ ಬಂದಾಗ ಆಗಿರುವ ಸಂತಸ ಎಲ್ಲವನ್ನೂ ಹಂಚಿಕೊಂಡಿದ್ದಾರೆ. ತಮ್ಮ ವಿರುದ್ಧದ ಎಲ್ಲ ಪ್ರಕರಣಗಳೂ ಕರ್ನಾಟಕಕ್ಕೆ ವರ್ಗವಾಗಲಿ ಎಂಬುದಾಗಿ ದೇವರಲ್ಲಿ ಬೇಡುತ್ತಿರುವುದಾಗಿ ಹೇಳಿದ್ದಾರೆ.

`ಎಷ್ಟು ದುಡ್ಡಿದ್ದರೂ ಏನೂ ಪ್ರಯೋಜನ ಆಗುವುದಿಲ್ಲ. ಈಗ ನನಗೆ ಏನು ಬೇಕಾದರೂ ಬೇರೆಯವರ ಬಳಿಯೇ ಕೇಳಬೇಕು. ಕಾಫಿ ಕುಡಿಯುವುದಕ್ಕೂ ಬೇರೆಯವರ ಬಳಿ ಕೈಚಾಚಬೇಕು~ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ತಮ್ಮ ತವರು ನೆಲ. ಇಲ್ಲಿದ್ದರೆ ನೆಮ್ಮದಿ ಇರುತ್ತದೆ. ಬೆಂಗಳೂರಿನ ಜೈಲಿನಲ್ಲಿಟ್ಟರೆ ತಮ್ಮ ಮನಸ್ಸಿಗೆ ನೆಮ್ಮದಿ ಇರುತ್ತದೆ. ಆದರೆ, ಹೈದರಾಬಾದ್‌ನ ಜೈಲಿನಲ್ಲಿರುವುದು ಕಡುಕಷ್ಟ ಎಂಬುದಾಗಿ ಅಳಲು ತೋಡಿಕೊಂಡಿದ್ದಾರೆ.

ಮನೆಗೆ ಆಹ್ವಾನ: ಹೀಗೆ ದೀರ್ಘವಾಗಿ ಸಂಕಟ ತೋಡಿಕೊಂಡ ಬಳಿಕ ರೆಡ್ಡಿ, ತಾವು ಜೈಲಿನಿಂದ ಬಿಡುಗಡೆ ಆಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಲಸೂರು ಗೇಟ್ ಠಾಣೆ ಪೊಲೀಸರ ಆತಿಥ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿ, ಬಿಡುಗಡೆ ಬಳಿಕ ತಮ್ಮ ಮನೆಗೆ ಭೇಟಿ ನೀಡುವಂತೆ ಪೊಲೀಸರಿಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.