ADVERTISEMENT

ಜ್ಞಾನ ಆಯೋಗದ ವರದಿ ಜಾರಿಗೆ ಕ್ರಮ: ಸಿಎಂ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST
ಮುಖ್ಯಮಂತ್ರಿ‌ ಎಚ್.ಡಿ.ಕುಮಾರಸ್ವಾಮಿ ಜತೆ ಜ್ಞಾನ ಆಯೋಗದ ಅಧ್ಯಕ್ಷ  ಕಸ್ತೂರಿ ರಂಗನ್‌ ಮಾತುಕತೆ ನಡೆಸಿದರು. ಸಚಿವ ಎನ್‌. ಮಹೇಶ್ ಮತ್ತು  ಎಸ್.ವಿ. ರಂಗನಾಥ್ ಇದ್ದಾರೆ .
ಮುಖ್ಯಮಂತ್ರಿ‌ ಎಚ್.ಡಿ.ಕುಮಾರಸ್ವಾಮಿ ಜತೆ ಜ್ಞಾನ ಆಯೋಗದ ಅಧ್ಯಕ್ಷ ಕಸ್ತೂರಿ ರಂಗನ್‌ ಮಾತುಕತೆ ನಡೆಸಿದರು. ಸಚಿವ ಎನ್‌. ಮಹೇಶ್ ಮತ್ತು ಎಸ್.ವಿ. ರಂಗನಾಥ್ ಇದ್ದಾರೆ .   

ಬೆಂಗಳೂರು: ಕರ್ನಾಟಕ ಜ್ಞಾನ ಆಯೋಗದ ವರದಿಯ ಶಿಫಾರಸ್ಸುಗಳ ಪ್ರಮುಖ ಅಂಶಗಳನ್ನು ಮುಂದಿನ ಬಜೆಟ್ ನಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ತಮ್ಮನ್ನು ಭೇಟಿಯಾದ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾದ ವಿಜ್ಞಾನಿ ಡಾ. ಕಸ್ತೂರಿ ರಂಗನ್, ಉಪಾಧ್ಯಕ್ಷ ಎಸ್.ವಿ. ರಂಗನಾಥ್ ಅವರ ಜೊತೆ ಮುಖ್ಯಮಂತ್ರಿ ಚರ್ಚಿಸಿದರು.

ರಾಜ್ಯದ ಅಭಿವೃದ್ದಿಗೆ ಪೂರಕವಾದ 16 ವಿಷಯಗಳ ಕುರಿತು ಜ್ಞಾನ ಆಯೋಗ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ಸಿದ್ದಪಡಿಸಿದೆ.

ADVERTISEMENT

ವರದಿಯಲ್ಲಿ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ, ಜೀವ ವಿಜ್ಞಾನ, ಕೌಶಲಾಭಿವೃದ್ದಿ, ಕೆರೆಗಳ ಸಂರಕ್ಷಣೆ ಹಾಗೂ ನೀರಿನ ಗುಣಮಟ್ಟ ರಕ್ಷಣೆ  ಕುರಿತು ಪ್ರಸ್ತಾಪಿಸಲಾಗಿದೆ. ಕರ್ನಾಟಕ ರಾಜ್ಯ ನೀರು ನೀತಿ, ಕರ್ನಾಟಕ ಅಂತರ್ಜಾಲ ಸುರಕ್ಷತಾ ನೋಟ ಮತ್ತು ಸರ್ಕಾರದ ಬೃಹತ್ ದತ್ತಾಂಶ ಯೋಜನೆ ಕುರಿತು ಶಿಫಾರಸು ಮಾಡಲಾಗಿದೆ.

ಸ್ಕೌಟ್ ಗೈಡ್ಸ್ ಉತ್ತೇಜನ:ಎಲ್ಲಾ ಸರ್ಕಾರಿ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆ ಕಡ್ಡಾಯಗೊಳಿಸಲು ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯ ಅವರ ನೇತೃತ್ವದ ನಿಯೋಗದ ಜೊತೆ ಸಭೆಯ ಬಳಿಕ  ಕುಮಾರಸ್ವಾಮಿ ಈ ಸೂಚನೆ ನೀಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ನೀಡಲು ಶಿಕ್ಷಕರನ್ನು ತರಬೇತಿಗೊಳಿಸಬೇಕಾಗಿದೆ. ಇದಕ್ಕೆ ಅಗತ್ಯ ಸಹಕಾರ ನೀಡಲು  ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.