ಯಾದಗಿರಿ: ‘ಸರ್ಕಾರದ ವತಿಯಿಂದ 26 ಜಯಂತಿಗಳನ್ನು ಆಚರಿಸಲಾಗುತ್ತಿದೆ. ಅದರಲ್ಲಿ ಟಿಪ್ಪು ಜಯಂತಿಯೂ ಒಂದು. ಆದರೆ, ಟಿಪ್ಪು ಜಯಂತಿಗೆ ಸಂಬಂಧಿಸಿದಂತೆ ಬಿಜೆಪಿಯು ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಭಾನುವಾರ ಇಲ್ಲಿ ಮಾತನಾಡಿದ ಅವರು, ‘ಕೆಜೆಪಿ ಸ್ಥಾಪನೆ ಮಾಡಿದ್ದಾಗ ಬಿ.ಎಸ್.ಯಡಿಯೂರಪ್ಪ ಟೋಪಿ ಧರಿಸಿ, ಖಡ್ಗ ಹಿಡಿದು ಟಿಪ್ಪುವನ್ನು ಹಾಡಿ ಹೊಗಳಿದ್ದರು. ಆ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ಇದ್ದರು. ಆದರೆ, ಮಡಿಕೇರಿ ಘಟನೆಯ ನಂತರ ಟಿಪ್ಪುವಿನ ಬಗ್ಗೆ ವಿರೋಧ ಮಾತುಗಳನ್ನಾಡುತ್ತಿದ್ದಾರೆ’ ಎಂದು ಅವರು ದೂರಿದರು.
‘ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಸುಳಿವು ಸಿಕ್ಕಿದೆ. ತನಿಖೆ ದೃಷ್ಟಿಯಿಂದ ಹೆಚ್ಚು ಹೇಳಿಕೆ ನೀಡಲಾಗದು’ ಎಂದು ಪ್ರತಿಕ್ರಿಯಿಸಿದರು.
‘ಹಂತಕರ ಬಂಧನಕ್ಕಾಗಿಯೇ ಎಸ್ಐಟಿಯನ್ನು ರಚಿಸಸಲಾಗಿದೆ. ಎಸ್ಐಟಿಗೆ ನೀಡಿದ ಪೊಲೀಸ್ ಅಧಿಕಾರಿಗಳನ್ನು ಗೃಹ ಇಲಾಖೆ ವಾಪಸ್ ಕರೆಸಿಕೊಂಡಿದೆ ಎಂಬುದು ಮಾಧ್ಯಮಗಳ ಸೃಷ್ಟಿ. ಯಾರನ್ನೂ ವಾಪಸ್ ಕರೆಯಿಸಿಕೊಂಡಿಲ್ಲ. ಹಂತಕರ ರೇಖಾ ಚಿತ್ರ ರಚನೆಯಾಗಿದ್ದು, ಹಂತಕನೊಬ್ಬನ ಹಣೆಯಲ್ಲಿ ತಿಲಕ ಚಿತ್ರಿಸಲಾಗಿದೆ ಎಂಬ ವಿವಾದವನ್ನೂ ಸೃಷ್ಟಿಸಲಾಗಿದೆ. ಎಸ್ಐಟಿಗೆ ಎಡ, ಬಲ ಪಂಥೀಯ ಧೋರಣೆ ಇಲ್ಲ. ಅದು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ. ಶೀಘ್ರದಲ್ಲಿ ಹಂತಕರನ್ನು ಪತ್ತೆ ಹಚ್ಚಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.