ಬೆಂಗಳೂರು: ‘ಪ್ರತಿ ಟಿ.ವಿ. ಚಾನೆಲ್ನಲ್ಲೂ ದಿನಕ್ಕೆರಡು ಗಂಟೆ ಜ್ಯೋತಿಷ ಪ್ರಸಾರವಾಗುತ್ತಿದೆ. ಚಾನೆಲ್ಗಳಲ್ಲಿ ಶಿಕ್ಷಣ, ವಿಜ್ಞಾನ ಹಾಗೂ ತಂತ್ರಜ್ಞಾನದ ಬಗ್ಗೆ ಚರ್ಚೆಯೇ ಆಗುತ್ತಿಲ್ಲ. ಉಪಗ್ರಹಗಳನ್ನು ಕಳುಹಿಸುವ ಹೊತ್ತಿಗೆ ನಾವು ಕುಜದೋಷ ಎಂದು ಕುಳಿತುಬಿಟ್ಟಿದ್ದೇವೆ’ ಎಂದು ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಡಾ.ಯು.ಆರ್.ರಾವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಬೆಂಗಳೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಟಿ.ವಿ. ಚಾನೆಲ್ಗಳಲ್ಲಿ ರಾಜಕೀಯಕ್ಕೆ ಮೊದಲ ಆದ್ಯತೆ. ಬಳಿಕ ಕ್ರಿಕೆಟ್, ಸಂಗೀತ, ನೃತ್ಯಗಳಿಗೆ ಮಾತ್ರ ಪ್ರಾಧಾನ್ಯತೆ ನೀಡಲಾಗುತ್ತಿದೆ’ ಎಂದು ಅವರು ನೊಂದು ನುಡಿದರು.
‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಇರುವುದೇ ಯುವಜನರಿಗಾಗಿ. ಯುವಕರಾಗಿದ್ದಾಗಲೇ ಉನ್ನತ ಸಾಧನೆ ಮಾಡಬೇಕು. ಈ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳೆಲ್ಲ ಅದ್ಭುತ ಸಾಧನೆ ಮಾಡಿದ್ದು ತಮ್ಮ 20–40ರ ವಯಸ್ಸಿನಲ್ಲೇ’ ಎಂದು ಸ್ಮರಿಸಿಕೊಂಡರು
.
‘ನಾನು ಬಹಳ ಕಷ್ಟಪಟ್ಟು ಓದಿದ್ದೇನೆ. ನಾನು ಓದುವ ಹೊತ್ತಿಗೆ ಉಡುಪಿಯಲ್ಲಿ ಕಾಲೇಜು ಇರಲಿಲ್ಲ. ನಾಲ್ಕು ನದಿಗಳನ್ನು ದಾಟಿ ಕಲಿಯಲು ಮಂಗಳೂರಿಗೆ ಹೋಗಬೇಕಿತ್ತು. ಬಳ್ಳಾರಿಯಲ್ಲಿ ಇಂಟರ್ಮೀಡಿಯೇಟ್ ಓದುವಾಗ ಮೊದಲ ಬಾರಿಗೆ ರೈಲು ನೋಡಿದೆ. ಕಾಶಿಯ ಬನಾರಸ್ ವಿವಿಯಲ್ಲಿ ಕಲಿಯುವಾಗ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಗೊತ್ತಾಯಿತು’ ಎಂದು ನೆನಪಿಸಿಕೊಂಡರು.
ಅನುದಾನ ನೀಡಿ: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ‘ವಿವಿಯಲ್ಲಿ ನನೆಗುದಿಗೆ ಬಿದ್ದಿರುವ ಕಟ್ಟಡ ಕಾಮಗಾರಿಗಳ ಪೂರ್ಣಗೊಳಿಸಬೇಕಿದೆ. ಶಿಕ್ಷಕ ಹಾಗೂ ಶಿಕ್ಷಕೇತರ ಹುದ್ದೆಗಳ ನೇಮಕಾತಿ ಆಗಬೇಕಿದೆ. ಇವಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕು’ ಎಂದು ಆಗ್ರಹಿಸಿದರು.
ರಾಜಕೀಯಕ್ಕೆ ಬನ್ನಿ
‘ಯುವಕರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಬೇಕು. ಸೇವಾ ಮನೋಭಾವದ ವ್ಯಕ್ತಿಗಳು ಅಧಿಕ ಸಂಖ್ಯೆಯಲ್ಲಿ ರಾಜಕೀಯ ಪ್ರವೇಶಿಸಿದರೆ ರಾಜಕೀಯ ಕ್ಷೇತ್ರ ಶುದ್ಧೀಕರಣ ಆಗುತ್ತದೆ’ ಎಂದು ಸಿ.ಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸೇವೆ ಮಾಡುತ್ತೇವೆ ಎಂದು ಹೇಳಿಕೊಂಡು ಬಹಳಷ್ಟು ರಾಜಕಾರಣಿಗಳು ಸಮಾಜವನ್ನು ಲೂಟಿ ಮಾಡಿದ್ದಾರೆ. ಆದ್ದರಿಂದ ಯುವಜನರು ಆಸ್ತಿ ಮಾಡುವ ಉದ್ದೇಶದಿಂದ ರಾಜಕೀಯ ಪ್ರವೇಶಿಸಬಾರದು’ ಎಂದು ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.