ವಿಜಯಪುರ: ತಮ್ಮ ಮೇಲಿನ ದಾಳಿಗೆ ಬೆದರುವುದಿಲ್ಲ ಎಂದಿರುವ ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ನಿಗದಿಯಾದಂತೆ ಮೇ ಮೊದಲ ವಾರದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡುವುದಾಗಿ ಬುಧವಾರ ಇಲ್ಲಿ ಹೇಳಿದರು.
ಧರ್ಮ ಪ್ರಚಾರದ ತಮ್ಮ ಕರ್ತವ್ಯದಿಂದ ಎಂದೂ ವಿಮುಖರಾಗುವುದಿಲ್ಲ. ಬಾಡಿಗೆ ಕಿಡಿಗೇಡಿಗಳ ದೌರ್ಜನ್ಯಕ್ಕೆ ಕಿಮ್ಮತ್ತು ನೀಡುವುದಿಲ್ಲ ಎಂದ ಅವರು, ತಮ್ಮ ಕಾರ್ಯಕ್ಕೆ ಪದೇ ಪದೇ ಅಡ್ಡಿಯಾದರೆ ಪೊಲೀಸ್ ರಕ್ಷಣೆ ಪಡೆದು ಬಬಲೇಶ್ವರದಲ್ಲಿ ಸಂಚರಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಪಂಚಪೀಠಾಧೀಶರು ಧಾರ್ಮಿಕ ಕಾರ್ಯಕ್ಕಾಗಿ ಪ್ರವಾಸ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ರಾಜ್ಯದ 223 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯದ ವಿದ್ಯಮಾನ ಬಬಲೇಶ್ವರದಲ್ಲಿ ಮಾತ್ರ ನಡೆಯುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.