ಹುಬ್ಬಳ್ಳಿ: ಧಾರವಾಡ ತಾಲ್ಲೂಕಿನ ನರೇಂದ್ರ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಕುರಿ ಕಾಯುತ್ತಿದ್ದ ಮಹಿಳೆ ಸಾವಿಗೀಡಾದ ಘಟನೆ ಸೋಮವಾರ ಸಂಜೆ ನಡೆದಿದೆ. ಮೃತಳನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಗಂಗವ್ವ ವಿಠ್ಠಲ ಮದಲಿ(23) ಎಂದು ಗುರುತಿಸಲಾಗಿದೆ.
ಧಾರವಾಡ ಮತ್ತು ಹುಬ್ಬಳ್ಳಿ ನಗರಗಳಲ್ಲೂ ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ಆಲಿಕಲ್ಲು ಸಮೇತ ಮಳೆ ಸುರಿದಿದೆ.
ವಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣ ಮತ್ತು ತಾಲ್ಲೂಕಿನ ಮಸಬಿನಾಳ, ಕಾನ್ನಾಳ ಗ್ರಾಮಗಳಲ್ಲಿ ಮಳೆಯಾಗಿದೆ. ಮುತ್ತಗಿ ಗ್ರಾಮದಲ್ಲಿ ರವೀಂದ್ರ ಮಾಮಲಪ್ಪ ಮಾಳಜಿ ಎಂಬುವವರ ತೋಟದಲ್ಲಿ ಸಿಡಿಲು ಬಡಿದು ಎರಡು ಆಕಳು ಮತ್ತು ಒಂದು ಎತ್ತು ಮೃತಪಟ್ಟಿವೆ.
ಹೊಳಲ್ಕೆರೆ (ಚಿತ್ರದುರ್ಗ ಜಿಲ್ಲೆ) ವರದಿ:
ಪಟ್ಟಣದಲ್ಲಿ ಸೋಮವಾರ ಸುರಿದ ಮಳೆಯಿಂದ ಚರಂಡಿಗಳು ತುಂಬಿ ಹರಿದು, ಹೊಟೇಲ್, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ.
ಬಸ್ ನಿಲ್ದಾಣದ ಮುಂಭಾಗ ಇರುವ ಪುಟ್ಟಣ್ಣ ಅವರ ಹೊಟೇಲ್, ಬಷೀರ್ ಸಾಬ್ ಅವರ ಬಾಳೆಕಾಯಿ ಮಂಡಿ ಹಾಗೂ ಪೀಠೋಪಕರಣ ಮಳಿಗೆಗಳಿಗೆ ನೀರು ನುಗ್ಗಿ ಸಾವಿರಾರು ರೂ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ.
ಮಳೆ, ಗಾಳಿಗೆ ಲಕ್ಷಾಂತರ ರೂ ಮೌಲ್ಯದ ಬಾಳೆ ನಷ್ಟವಾಗಿದೆ. ಒಂದು ಗಂಟೆಗೂ ಹೆಚ್ಚುಕಾಲ ಆಲಿಕಲ್ಲು ಮಳೆ ಸುರಿದಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಕೆಳಗಿನ ಕೊಟ್ಟಿಗೆ ಸಮೀಪ ರಾಜ್ಯ ಹೆದ್ದಾರಿ-47ರ ಮೇಲೆ ಮರವೊಂದು ಉರುಳಿಬಿದ್ದ ಪರಿಣಾಮ ಸುಮಾರು ಮೂರ್ನಾಲ್ಕು ಗಂಟೆ ಸಂಚಾರ ಸ್ಥಗಿತಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.