ಮಂಗಳೂರು: ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ವಿಧಾನ ಸೌಧದ ಗೋಡೆ ಒಡೆದಿದ್ದಕ್ಕೆ ಕಾಂಗ್ರೆಸ್ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಕಿಡಿ ಕಾರಿದ್ದಾರೆ.
‘ನಾನು ಮುಖ್ಯಮಂತ್ರಿಯಾಗಿರುತ್ತಿದ್ದರೆ, ಆಂಜನೇಯ ಅವರು ಮನೆಯನ್ನು ತಲುಪುವ ಮೊದಲೇ ಸಂಪುಟದಿಂದ ಕಿತ್ತುಹಾಕುತ್ತಿದ್ದೆ’ ಎಂದು ಅವರು ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಮಗೆ ಅಧಿಕಾರ ಸಿಕ್ಕಿದರೆ ಸಾಕಾಗುವುದಿಲ್ಲವೇ? ಎಂಥಾ ಢಂಬಾಚಾರ ಇದು. ಇಷ್ಟರವರೆಗೆ ವಿಧಾನಸೌಧದ ಆ ಕೊಠಡಿಯಲ್ಲಿ ಯಾರೂ ಆಡಳಿತವನ್ನೇ ನಡೆಸಿಲ್ಲವೇ?’ ಎಂದು ಅವರು ಪ್ರಶ್ನಿಸಿದರು.
‘ಎಲ್ಲಾ ಪಕ್ಷದವರೂ ಈ ಕೆಟ್ಟ ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಡಿ.ಕೆ.ಶಿವಕುಮಾರ್ ಹಾಗೂ ರೋಷನ್ಬೇಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದನ್ನು ಪೂಜಾರಿ ಸಮರ್ಥಿಸಿಕೊಂಡರು.
‘ಎಸ್.ಆರ್.ಹಿರೇಮಠ್ ಅವರು ಈ ಇಬ್ಬರು ಸಚಿವರ ವಿರುದ್ಧ ಬಿಡುಗಡೆ ಮಾಡಿದ ದಾಖಲೆಗಳಲ್ಲಿ ಹೊಸ ಅಂಶಗಳೇನೂ ಇಲ್ಲ’ ಎಂದು ಪೂಜಾರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.