ADVERTISEMENT

ನಾಯಿ ಬೇಟೆಗೆ ಬಂದ ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
ಹಾಸನ ತಾಲ್ಲೂಕಿನ ವಿ.ನಾಗೇನಹಳ್ಳಿಯಲ್ಲಿ ಸೆರೆ ಸಿಕ್ಕ ಚಿರತೆ
ಹಾಸನ ತಾಲ್ಲೂಕಿನ ವಿ.ನಾಗೇನಹಳ್ಳಿಯಲ್ಲಿ ಸೆರೆ ಸಿಕ್ಕ ಚಿರತೆ   

ಹಾಸನ: ನಾಯಿ ಬೇಟೆಯಾಡಲು ಹೋಗಿ ಮನೆಯೊಳಗೆ ಬಂಧಿಯಾಗಿದ್ದ ಎರಡು ವರ್ಷದ ಗಂಡು ಚಿರತೆಯನ್ನು ಶುಕ್ರವಾರ ಸತತ 8 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ವಿ.ನಾಗೇನಹಳ್ಳಿಯ ವೇಲಾಪುರಿಗೌಡ ಎಂಬುವರ ಮನೆಗೆ ಮಧ್ಯರಾತ್ರಿ ನಾಯಿ ಬೇಟೆಯಾಡಲು ಬಂದಿತ್ತು. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಬಿಟ್ಟು ಬಿಟ್ಟು ಸುರಿಯುತ್ತಿದ್ದ ತುಂತುರು ಮಳೆಯಿಂದ ಕಾರ್ಯಾಚರಣೆಗೆ ಅಡ್ಡಿಯಾಯಿತು. ಆದರೂ ಸಿಬ್ಬಂದಿ ಖಾರದ ಪುಡಿ ಹೊಗೆ ಹಾಕಿ, ಪಟಾಕಿ ಸಿಡಿಸಿ ಕಾರ್ಯಾಚರಣೆ ಮುಂದುವರಿಸಿದರು.

ವಿಶಾಲವಾದ ಮನೆಯೊಳಗೆ ಅಟ್ಟ ಏರಿ ಅಡಗಿ ಕೂತು, ಸಾಕಷ್ಟು ಕಾಡಿಸಿತು. ಆದರೂ ಸೂಕ್ತ ಸಮಯ ಕಾದು, ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಸೆರೆ ಹಿಡಿದರು. ‘ಚಿರತೆ ಸೆರೆ ಕಾರ್ಯಾಚರಣೆ ಎಷ್ಟು ಕಷ್ಟವಾಗಿತ್ತು ಎಂದರೆ ವಿಶಾಲವಾದ ಮನೆಯೊಳಗೆ ಯಾವ ಮೂಲೆಯಲ್ಲಿ ಅಡಗಿ ಕುಳಿತಿದೆ ಎಂಬುದನ್ನು ಪತ್ತೆ ಮಾಡಲು ಸಾಕಷ್ಟು ಶ್ರಮಿಸಬೇಕಾಯಿತು. ಗಂಡು ಚಿರತೆ ಸದ್ಯ ಆರೋಗ್ಯವಾಗಿದೆ. ಮನೆಯೊಳಗೆ ಓಡಾಡುವ ವೇಳೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಾಕಷ್ಟು ಘಾಸಿಗೊಂಡಿದೆ. ಚಿಕಿತ್ಸೆ ನೀಡಿ ನಂತರ ಅರಣ್ಯಕ್ಕೆ ಬಿಡಲಾಗುವುದು’ ಎಂದು ಉಪ ಅರಣ್ಯಸಂರಕ್ಷಣಾಧಿಕಾರಿ ಶಿವರಾಂ ಬಾಬು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.