ಮೈಸೂರು: ಕಾವೇರಿ ನ್ಯಾಯಮಂಡಳಿಯ ಐತೀರ್ಪಿನ ಪ್ರಕಾರ ಜುಲೈ ತಿಂಗಳಲ್ಲಿ 50 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಬಿಡಬೇಕು. ಮುಂಗಾರು ಮಳೆಯಿಂದ ಜಲಾಶಯಕ್ಕೆ ಹರಿದುಬಂದಿರುವ ನೀರಿನಲ್ಲಿ ನಾಲ್ಕೈದು ಟಿಎಂಸಿ ಅಡಿ ನೀರನ್ನು ಬಿಡಲಾಗಿದೆ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.
‘ನೀರು ಹರಿಸುವಂತೆ ಕೋರಿ ತಮಿಳುನಾಡು ಸರ್ಕಾರ ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯದಲ್ಲಿ ರಾಜ್ಯದ ವಾದವನ್ನು ಸಮರ್ಥನೆ ಮಾಡಿಕೊಳ್ಳಲು ಸ್ವಲ್ಪ ಪ್ರಮಾಣದ ನೀರು ಬಿಡುವುದು ಅನಿವಾರ್ಯ. ಇಲ್ಲದಿದ್ದರೆ ವಿಚಾರಣೆ ವೇಳೆ ತೊಂದರೆ ಆಗುತ್ತದೆ. ಮೇಕೆದಾಟು ಬಳಿ ನಿರ್ಮಿಸಲು ಉದ್ದೇಶಿಸಿದ ಅಣೆಕಟ್ಟೆಗೆ ಸಂಬಂಧಿಸಿದಂತೆ ಪರಿಷ್ಕೃತ ವಿಸೃತ ಯೋಜನಾ ವರದಿ (ಡಿಪಿಆರ್) ಸಲ್ಲಿಕೆ ಮಾಡಲಾಗಿದೆ’ ಎಂದರು.
ನೀರು ಬಿಡಲು ನಮಗೇನು ಹುಚ್ಚಾ (ನಂಜನಗೂಡು ವರದಿ): ‘ತಮಿಳುನಾಡಿಗೆ ನೀರು ಬಿಟ್ಟು ನಮ್ಮ ರೈತರನ್ನು ಒಣಗಿಸಬೇಕು ಎಂದು ನಮಗೇನೂ ಹುಚ್ಚು ಹಿಡಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದರು.
ನ್ಯಾಯಾಲಯದ ಆದೇಶ ಇದ್ದರೂ ತಮಿಳುನಾಡಿಗೆ ನೀರು ಕೊಡಲು ಆಗಿಲ್ಲ. ಮಳೆಯೇ ಇಲ್ಲದಿದ್ದರೆ ನೀರು ಹರಿಸುವುದು ಹೇಗೆ ಎಂದು ಪ್ರಶ್ನಿಸಿದರು.
ನೀರು ಹರಿಸುವಂತೆ ಕೋರಿ ತಮಿಳುನಾಡಿನವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅವರಿಗೂ ನಮಗೂ ವ್ಯಾಜ್ಯ ನಡೆಯುತ್ತಿದೆ, ನಮಗೆ ನೀರೇ ಕೊಡಲ್ಲ ಎಂದು ತಮಿಳುನಾಡು ವಾದ ಮಾಡಬಾರದು ಎಂಬ ಉದ್ದೇಶದಿಂದ ಸ್ವಲ್ಪ ನೀರು ಬಿಟ್ಟಿದ್ದೇವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.