ADVERTISEMENT

ನೀತಿ ಕಥೆ ಹೇಳಿದ ಚಿತ್ರಗಳು...

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST

ಮಂಡ್ಯ: ನೆಲ, ಜಲ, ವಾಯು, ಶಬ್ದ ಮಾಲಿನ್ಯ, ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿರುವುದು ಸೇರಿದಂತೆ ಅನೇಕ ಕಾರಣಗಳಿಂದ ಪರಿಸರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು... ನಾವು ವಹಿಸಬಹುದಾದ ಎಚ್ಚರಿಕೆ ಕುರಿತಂತೆ ಮಕ್ಕಳು ರಚಿಸಿದ ಚಿತ್ರಗಳು ನೀತಿ ಕಥೆಗಳನ್ನು ಹೇಳುವಂತಿದ್ದವು...!

`ವಿಶ್ವ ಪರಿಸರ ದಿನಾಚರಣೆ' ಪ್ರಯುಕ್ತ ಪರಿಸರ ನಿಯಂತ್ರಣ ಮಂಡಳಿ ಮತ್ತು ಪರಿಸರ ರೂರಲ್ ಡೆವಲೆಪ್‌ಮೆಂಟ್ ಸೊಸೈಟಿ ವತಿಯಿಂದ ನಗರದಲ್ಲಿ ವಿದ್ಯಾರ್ಥಿಗಳಿಗಾಗಿ ಸೋಮವಾರ ಏರ್ಪಡಿಸಿದ್ದ `ಚಿತ್ರಕಲಾ' ಸ್ಪರ್ಧೆಯಲ್ಲಿ ಪರಿಸರ ಸಂರಕ್ಷಣೆ ಮಗ್ಗುಲುಗಳು ಅನಾವರಣಗೊಂಡವು.

ವಿದ್ಯಾರ್ಥಿಗಳು ತಮ್ಮ ಮನದಲ್ಲಿ ಮೂಡಿದ ಕಲ್ಪನೆಗೆ ರೇಖೆ ಮತ್ತು ಬಣ್ಣದ ಮೂಲಕ ಆಕಾರ ನೀಡಿದರು. ಸಹಜತೆ ಮತ್ತು ಸರಳತೆಯಿಂದ ಕೂಡಿದ್ದ ಚಿತ್ರಗಳು ಗಮನ ಸೆಳೆದವು.

`ಪರಿಸರ ಸಂರಕ್ಷಣೆ' ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಆಯೋಜಿಸಿದ್ದ ಸ್ಪರ್ಧೆಯಲ್ಲಿ ಸುಮಾರು 65 ಮಂದಿ ಭಾಗವಹಿಸಿದ್ದರು. 3 ವಿಭಾಗಗಳಲ್ಲಿ ಸ್ಪರ್ಧೆ ಜರುಗಿತು.

ಜಾಗೃತಿ ನಿರಂತರವಾಗಿರಲಿ:  ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪರಿಸರ ಅಧಿಕಾರಿ ಬಿ.ಎಂ. ಪ್ರಕಾಶ್, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು.  ಮನುಷ್ಯ ಆರೋಗ್ಯವಾಗಿರಬೇಕೆಂದರೆ, ಪರಿಸರ ಕೂಡ ಆರೋಗ್ಯವಾಗಿರಬೇಕು. ವಿವಿಧ ಕಾರಣಗಳ ಕಾರಣ ಕಲುಷಿತವಾಗುತ್ತಿರುವ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಪ್ರತಿ ದಿನವೂ ಆಹಾರ ಉತ್ಪಾದನೆ ಕ್ಷೀಣಿಸುತ್ತಿದ್ದು, ಶೇ 60ರಷ್ಟು ಆಹಾರವು ವ್ಯರ್ಥವಾಗುತ್ತಿದೆ. ಇದು, ಹೀಗೆ ಮುಂದುವರಿದರೆ ಆಹಾರ ಕ್ಷಾಮ ತಲೆದೋರಲಿದೆ ಎಂದು ಎಚ್ಚರಿಸಿದರು.

ಪರಿಸರ ರೂರಲ್ ಡೆವಲೆಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ. ಯೋಗೀಶ್, ಸಹಾಯಕ ಅಧಿಕಾರಿ ಹೇಮಲತಾ, ಕೃಷ್ಣೇಗೌಡ, ಫಿಲೋಮಿನಾ, ಸುಧಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.