ನಾಪೋಕ್ಲು (ಕೊಡಗು ಜಿಲ್ಲೆ): ಪಶ್ಚಿಮಘಟ್ಟ ಉಳಿಸಿ ಪಾದಯಾತ್ರೆಯ 30ನೇ ವರ್ಷಾಚರಣೆಯ ಜನಜಾಗೃತಿ ಅಭಿಯಾನದ ಅಂಗವಾಗಿ ತಲಕಾವೇರಿಯಿಂದ ಭಾಗಮಂಡಲದ ತನಕ ಶುಕ್ರವಾರ ಪಾದಯಾತ್ರೆ ನಡೆಯಿತು.
ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಗಿಡನೆಟ್ಟು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ಬಳಿಕ ನಡೆದ ಸರಳ ಕಾರ್ಯಕ್ರಮದಲ್ಲಿ ಪರಿಸರ ಬರಹಗಾರ ನಾಗೇಶ ಹೆಗಡೆ ಅವರ ‘ಅಪೂರ್ವ ಪಶ್ಚಿಮಘಟ್ಟ’ ಪುಸ್ತಕವನ್ನು ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣಾಚಾರ್ ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ‘ಮೂವತ್ತು ವರ್ಷದಿಂದ ರಾಜ್ಯದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಕನ್ಯಾಕುಮಾರಿಯಿಂದ ಗೋವಾ ತನಕ ಪಾದಯಾತ್ರೆ ನಡೆಸಿದ್ದು, ಸಂಘ– ಸಂಸ್ಥೆಗಳ ಪ್ರಮುಖರು, ಧಾರ್ಮಿಕ ಮುಖಂಡರು ಭಾಗಿ
ಯಾಗಿದ್ದರು. ಕರ್ನಾಟಕದಲ್ಲಿ ಹಲವು ಸಂಘಟನೆಗಳು ಹೋರಾಟ ನಡೆಸಿ ಸರ್ಕಾರದ ಮೇಲೆ ಒತ್ತಡ ತಂದಿವೆ. ಪಶ್ಚಿಮ ಘಟ್ಟದಲ್ಲಿ ಬೇಡ್ತಿಯಿಂದ ಬರಪೊಳೆ, ತಗಡಿಯಿಂದ ಬೇಡ್ತಿವರೆಗಿನ ನದಿ ಕಣಿವೆ ಉಳಿಸುವ ಹೋರಾಟ ನಡೆಸಲಾಗಿದೆ. ತಲಕಾವೇರಿಯಿಂದ ಭಾಗಮಂಡಲದವರೆಗೆ ಪಶ್ಚಿಮಘಟ್ಟ ಉಳಿಸಿ ಪಾದಯಾತ್ರೆ ನಡೆದಿದ್ದು, ಮುಂದೆ ಐದು ಜಿಲ್ಲೆಗಳಲ್ಲಿ ಎರಡು ತಿಂಗಳು ಶಿಬಿರ ನಡೆಯಲಿದೆ’ ಎಂದರು.
ಜನಾಂದೋಲನದ ಪ್ರಮುಖರಾದ ರವಿಚೆಂಗಪ್ಪ, ವೈ.ಬಿ.ರಾಮಕೃಷ್ಣ, ಟಿ.ವಿ.ರಾಮಚಂದ್ರ, ಡಾ.ವಿಷ್ಣುಕಾಮತ್, ಡಾ.ಕೇಶವ, ಬಿ.ಎಂ.ಕುಮಾರಸ್ವಾಮಿ, ಬಿ.ಪಿ.ರಾಘವೇಂದ್ರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.